ಬೆಂಗಳೂರು: ಅವರು ಯುವಕರಾಗಿದ್ದಾಗ ಮಂಜು ಮಾಂಡವ್ಯ, ಥಿಯೇಟರ್ ನಲ್ಲಿ ತಮ್ಮ ನೆಚ್ಚಿನ ಹೀರೋಗಳು ತೆರೆಯ ಮೇಲೆ ಮೂಡಿದಾಗ ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರಂತೆ. ಕಾಲೇಜು ದಿನಗಳಲ್ಲಿ ತಮ್ಮ ನೆಚ್ಚಿನ ಹೀರೋಗಳನ್ನು ಅನುಕರಿಸಿ ವೇದಿಕೆ ಮೇಲೆ ಅಭಿನಯಿಸುತ್ತಿದ್ದರು ಕೂಡ. ನಂತರ ಹಲವು ವರ್ಷಗಳ ಪರಿಶ್ರಮದ ನಂತರ, ಸಂಭಾಷಣಕಾರರಾಗಿ ಕೊನೆಗೆ ಯಶ್ ನಟನೆಯ 'ಮಾಸ್ಟರ್ ಪೀಸ್' ಕೂಡ ನಿರ್ದೇಶಿಸಿದ ಹೆಗ್ಗಳಿಕೆ. ಈಗ ಮಂಜು ಮಾಂಡವ್ಯ ತಮ್ಮ ನೆಚ್ಚಿನ ಆರಾಧ್ಯ ನಟ ಉಪೇಂದ್ರ ಅವರನ್ನು ನಿರ್ದೇಶಿಸಲಿದ್ದಾರೆ.
ವಿಶೇಷವೆಂದರೆ ಇದು ಉಪೇಂದ್ರ ಅವರ 50 ನೆಯ ಚಿತ್ರ! "ಅಭಿಮಾನಿಯೇ ಕನಸು ನನಸಾಗಿದೆ" ಎನ್ನುತ್ತಾರೆ ಮಂಜು.
ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕುವ ಮಂಜು, ವೇದಿಕೆ ಮೇಲೆ ಉಪ್ಪಿ ಅವರ ಸಿನೆಮಾಗಳ ಸಂಭಾಷಣೆಯನ್ನು ಉದುರಿಸುತ್ತಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ನಾನು ಅವರ ನಿರ್ದೇಶನದ ಅತಿ ದೊಡ್ಡ ಅಭಿಮಾನಿ. ಅವರ ಸಂಭಾಷಣೆ, ನಿರೂಪಣೆಯ ಶೈಲಿ ಮತ್ತು ನಿರ್ದೇಶನವನ್ನು ಸಂಪೂರ್ಣ ಸವಿಯುತ್ತಿದ್ದೆ. ನನಗೆ ಸಿನೆಮಾ ರಂಗಕ್ಕೆ ಬರಲು ಅವರೇ ದೊಡ್ಡ ಸ್ಫೂರ್ತಿ. ಅವರ ಎಲ್ಲ ಸಿನೆಮಾಗಳನ್ನು ನೋಡಿದ್ದೇನೆ ಮತ್ತು ಅವರು ನನ್ನ ಮಾರ್ಗದರ್ಶಕ ಇದ್ದಂತೆ" ಎನ್ನುತ್ತಾರೆ.