ಸಿನಿಮಾ ಸುದ್ದಿ

ಗಣಪತಿ ವಿಸರ್ಜನೆ ವೇಳೆ ಪತ್ರಕರ್ತನಿಗೆ ಕಪಾಳಮೋಕ್ಷ ಮಾಡಿದ ನಟ ರಣಧೀರ್ ಕಪೂರ್

Manjula VN

ಮುಂಬೈ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಹೇಳಿಕೆ ದಾಖಲಿಸಿಕೊಳ್ಳಲು ಹೋಗಿದ್ದ ಪತ್ರಕನೊಬ್ಬನಿಗೆ ನಟ ರಣಧೀರ್ ಕಪೂರ್ ಅವರು ಕಪಾಳಮೋಕ್ಷ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಂಟ್ರಲ್ ಮುಂಬೈನ ದಾದರ್'ನ ಶಿವಾಜಿ ಪಾರ್ಕ್ ಬಳಿಯಿರುವ ಆರ್.ಕೆ. ಸ್ಟುಡಿಯೋದಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ ಅದ್ಧೂರಿಯಾಗಿ ಪೂಜಾ ಕೈಂಕರ್ಯಗಳನ್ನು ಮಾಡಲಾಗಿತ್ತು. ಇದರಂತೆ ನಿನ್ನೆ ಗಣಪತಿ ಮೂರ್ತಿ ವಿಸರ್ಜನೆ ಮಾಡುವ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿತ್ತು. ಮೂರ್ತಿ ವಿಸರ್ಜನಾ ಕಾರ್ಯಕ್ರಮಕ್ಕೆ ರಣಧೀರ್ ಕಪೂರ್, ರಿಷಿ ಕಪೂರ್, ರಾಜೀವ್ ಮತ್ತು ರಣಬೀರ್ ಕಪೂರ್ ಹಾಜರಿದ್ದರು.

ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವಿಡಿಯೋದಲ್ಲಿ, ನಟ ರಣಧೀರ್ ಕಪೂರ್ ಹಾಗೂ ಅವರ ಸಹೋದರ ರಿಷಿ ಕಪೂರ್ ಇಬ್ಬರೂ ಗಣಪತಿ ಮೂರ್ತಿ ವಿಸರ್ಜನೆ ಮಾಡುವ ಪೂಜಾ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಈ ವೇಳೆ ಪತ್ರಕರ್ತನೊಬ್ಬ ರಣಧೀರ್ ಕಪೂರ್ ಅವರ ಹೇಳಿಕೆಯನ್ನು ಕೇಳಲು ಹೋದಾಗ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದಾರೆ. ಇದರಂತೆ ರಿಷಿ ಕಪೂರ್ ಕೂಡ ಸೆಲ್ಫೀ ತೆಗೆದುಕೊಳ್ಳಲು ಅನುಮತಿ ಕೇಳಿದ ಅಭಿಮಾನಿಯನ್ನು ದೂರ ತಳ್ಳಿ ಕಾರಿನಲ್ಲಿ ಹೋಗಿದ್ದಾರೆ.

ಮೂರ್ತಿ ವಿಸರ್ಜನೆ ವೇಳೆ ಪತ್ರಕರ್ತರು ಕಪೂರ್ ಕುಟುಂಬದ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ, ಹೇಳಿಕೆಯನ್ನು ನೀಡುವಂತೆ ಕೇಳಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ರಿಷಿ ಕಪೂರ್ ಅವರು ಟಿವಿ ಮಾಧ್ಯಮದವರನ್ನು ದೂರ ತಳ್ಳಿದ್ದಾರೆ. ಅಲ್ಲದೆ, ರಣಧೀರ್ ಕಪೂರ್ ಅವರು ಇಬ್ಬರು ಛಾಯಾಗ್ರಾಹಕರಿಗೆ ಹೊಡೆದಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ನಟ ರಣಧೀರ್ ಕಪೂರ್ ಅವರಿಂದ ಹೊಡೆತ ತಿಂದ ವ್ಯಕ್ತಿ ಪತ್ರಕರ್ತನೇ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.

SCROLL FOR NEXT