ಬೆಂಗಳೂರು: 9 ವರ್ಷಗಳ ಹಿಂದೆ ಕಾವೇರಿ ವಿವಾದದ ಸಂದರ್ಭದಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳು ನಟ ಸತ್ಯರಾಜ್ ಕೊನೆಗೂ ಕನ್ನಡಿಗರ ಹೋರಾಟಕ್ಕೆ ತಲೆಬಾಗಿ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಭಾರತದ ಬಹುನಿರೀಕ್ಷಿತ ಬಾಹುಬಲಿ 2 ಚಿತ್ರ ಕರ್ನಾಟದಲ್ಲಿ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಕನ್ನಡಿಗರನ್ನು ತುಚ್ಛವಾಗಿ ಕಂಡು ಅವಹೇಳನಕಾರಿಯಾಗಿ ಮಾತನಾಡಿದ್ದ ಸತ್ಯರಾಜ್ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಾಹುಬಲಿ 2 ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದ್ದವು. ಇದೀಗ ಕನ್ನಡಿಗರ ಹೋರಾಟಕ್ಕೆ ಮಣಿದಿರುವ ಬಾಹುಬಲಿ ಚಿತ್ರದ ಪಾತ್ರಧಾರಿ ಕಟ್ಟಪ್ಪ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕಾವೇರಿ ವಿವಾದದ ಸಮಯದಲ್ಲಿ ಅಂದರೆ 9 ವರ್ಷಗಳ ಹಿಂದೆ ಈ ರೀತಿಯ ಹೇಳಿಕೆ ನೀಡಿದ್ದೆ. ಇದರಿಂದ ಕನ್ನಡಿಗರಿಗೆ ನೋವುಂಟು ಮಾಡಿದಕ್ಕೆ ಕ್ಷಮೆ ಇರಲಿ. ನಾನೆಂದಿಗೂ ಕನ್ನಡಿಗರ ವಿರೋಧಿಯಲ್ಲ. ನನ್ನಲ್ಲಿ ಕ್ಷಮೆ ಇರಲಿ. ಬಾಹುಬಲಿ 2 ಚಿತ್ರದಲ್ಲಿ ನಾನೊಬ್ಬ ಪಾತ್ರಧಾರಿಯಷ್ಟೇ ಇದರಿಂದ ಚಿತ್ರದ ಬಿಡುಗಡೆಗೆ ತೊಂದರೆಯಾಗುವುದು ಬೇಡ. ಚಿತ್ರದ ಬಿಡುಗಡೆಗೆ ಕನ್ನಡಿಗರು ಅವಕಾಶ ಮಾಡಿಕೊಡಬೇಕು ಎಂದು ತಾನು ಮಾತನಾಡಿರುವ ವಿಡಿಯೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.