ಬೆಂಗಳೂರು: ಕನ್ನಡ ಚಿತ್ರರಂಗದ ಹೊಸ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿರುವ ರಕ್ಷಿತ್ ಶೆಟ್ಟಿ ಕೇವಲ ನಟನೆಗೆ ಸೀಮಿತಗೊಂಡವರಲ್ಲ. ಬರವಣಿಗೆ, ನಿರ್ದೇಶನ ಮತ್ತು ನಿರ್ಮಾಣದಲ್ಲಿಯೂ ಆಸಕ್ತಿ ಹೊಂದಿರುವ ಈ ನಟ ಈಗ ಡ್ಯಾನಿಷ್ ಸೈಟ್ ಅವರ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಸಿನೆಮಾದ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಈ ಸಿನೆಮಾದ ಸಹ ನಿರ್ಮಾಪಕರ ಪಟ್ಟಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಹೇಮಂತ್ ರಾವ್ ಕೂಡ ಇದ್ದು, ಇವರ ಜೊತೆಗೆ ರಕ್ಷಿತ್ ಶೆಟ್ಟಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಕೆಲಸ ಮಾಡಿದ್ದರು. ಪುಷ್ಕರ್, ರಕ್ಷಿತ್ ಅಭಿನಯದ 'ಕಿರಿಕ್ ಪಾರ್ಟಿ'ಯಲ್ಲಿ ಹೂಡಿಕೆ ಮಾಡಿದ್ದರು. ಹೀಗೆ ತ್ರಿಮೂರ್ತಿ ಬಳಗ ಮತ್ತೆ ಒಂದಾಗಿದೆ.
ಸಾದ್ ಖಾನ್ ನಿರ್ದೇಶನದ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಮುಹೂರ್ತ ಮಂಗಳವಾರ ನೆರವೇರಲಿದೆ. "ಸೃಜನಶೀಲ ತಂಡದ ಭಾಗವಾಗಿರುವುದಕ್ಕೆ ನನಗೆ ಸಂತಸವಾಗುತ್ತದೆ ಮತ್ತು ಡ್ಯಾನಿಶ್ ಸೈಟ್ ನಂತ ನಟನ ಜೊತೆಗೆ ತೊಡಗಿಸಿಕೊಳ್ಳುವುದು ಆಸಕ್ತಿದಾಯಕ. ನಾನು ಕೆಲವು ದಿನಗಳ ಹಿಂದೆ ಕಥೆ ಕೇಳಿದೆ. ಇದು ನವ ಯುಗದ ವಿಡಂಬನೆ. ಇದರಲ್ಲಿ ಸಾಕಷ್ಟು ಹಾಸ್ಯ ಇದೆ ಮತ್ತು ಸೂಕ್ಷ್ಮವಾಗಿ ದಾಟಿಸಿರುವ ಸಂದೇಶ ಇದೆ. ಪ್ರೇಕ್ಷಕರು ಹೊಟ್ಟೆ ತುಂಬಾ ನಗುವ ಚಿತ್ರ ಇದು. ಚಿತ್ರತಂಡವನ್ನು ಸೇರಿರುವುದಕ್ಕೆ ನನಗ ಸಂತಸವಿದೆ" ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
"ಇಂದು ಕೇವಲ ಹಣಗಳಿಸುವುದಷ್ಟೇ ಮಾನದಂಡವಲ್ಲ. ಒಳ್ಳೆಯ ಸಿನೆಮಾ ಹೊರತರುವುದಕ್ಕೆ ಸೃಜನಶೀಲ ಮನಸ್ಸುಗಳು ಒಟ್ಟಾಗುತ್ತಿರುವುದಕ್ಕೆ ನನಗೆ ಸಂತಸವಿದೆ. ಯಾರ ಜೊತೆಗಾದರೂ ಸಹಯೋಗ ಮಾಡಲು ಒಳ್ಳೆಯ ಒಡನಾಟ ಬೇಕು. ಈ ನಿಟ್ಟಿನಲ್ಲಿ ರಕ್ಷಿತ್ ಮತ್ತು ಹೇಮಂತ್ ಜೊತೆಗೆ, ನನಗೆ ಸಿನೆಮಾ ಮತ್ತು ಅದರ ಹೊರಗೆ ಒಳ್ಳೆಯ ಗೆಳೆತನವಿದೆ. 'ಕಿರಿಕ್ ಪಾರ್ಟಿಗೆ ರಕ್ಷಿತ್ ನನ್ನನ್ನು ತೊಡಗಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಆದರೆ ಇವೆಲ್ಲವೂ ನಡೆದದ್ದು ಗೆಳೆತನಕ್ಕಾಗಿ ಮತ್ತು ಈಗ ನನ್ನ ಮನವಿ ಮೇರೆಗೆ ಅವರು 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ತಂಡ ಸೇರಿದ್ದಾರೆ. ನಮ್ಮ ತ್ರಿಮೂರ್ತಿ ಬಳಗ ಯಶಸ್ಸು ಕಾಣುತ್ತದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ಪುಷ್ಕರ್.
ಸುರೇಶ ಸುಮುಖಿ ನಾಯಕ ನಟಿಯಾಗಿದ್ದು, ಶ್ರುತಿ ಹರಿಹರನ್ ಮತ್ತು ರೋಜರ್ ನಾರಾಯಣ್ ಕೂಡ ತಾರಾಗಣದ ಭಾಗವಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos