ಬೆಂಗಳೂರು: ಸೈಕಾಲಾಜಿಕಲ್ ಥ್ರಿಲ್ಲರ್ 'ಎ' ಸಿನೆಮಾದ ಮೂಲಕ ನಿರ್ದೇಶಕ ಮತ್ತು ನಾಯಕನಟನಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಉಪೇಂದ್ರ ಯುವ ಸಿನೆಮಾ ಪ್ರೇಕ್ಷಕರಿಗೆ ತಮ್ಮ ವಿಚಿತ್ರ ಮ್ಯಾನರಿಸಂ ಮೂಲಕ ಹುಚ್ಚೆಬ್ಬಿಸಿದ್ದವರು. ನಂತರ ನಿರ್ದೇಶನ ಕಾರ್ಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡು ಹೆಚ್ಚು ನಟನೆಗೆ ಒತ್ತು ಕೊಟ್ಟವರು. ನಿರ್ದೇಶನ ಮಾಡುವಂತೆ ಆಗ ಅವರ ಅಭಿಮಾನಿಗಳ ಕೂಗು ಹೆಚ್ಚಿದಂತೆ, ಸೂಪರ್, ಉಪ್ಪಿ-೨ ಮುಂತಾದ ಸಿನೆಮಾಗಳನ್ನು ಮಾಡಿದರಾದರೂ, 'ಎ', 'ಉಪೇಂದ್ರ' ಮಟ್ಟಿಗೆ ಈ ಸಿನೆಮಾಗಳು ಯಶಸ್ಸು ಕಾಣಲಿಲ್ಲ.
ಈಗ ಅವರ ೫೦ ನೆಯ ಸಿನೆಮಾಗೆ ಅವರೇ ವಿಶಿಷ್ಟವಾದ ಸಿನೆಮಾವೊಂದನ್ನು ನಿರ್ದೇಶಿಸಕೊಳ್ಳಲಿದ್ದಾರೆ ಎಂಬ ಗುಲ್ಲು ಗಾಂಧಿನಗರದಲ್ಲಿ ಎದ್ದಿದೆ. ಇದಕ್ಕಾಗಿ ಅವರು ೧೫-೨೦ ದಿನಗಳಿಂದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಒಮ್ಮೆ ಸ್ಕ್ರಿಪ್ಟ್ ಅಂತಿಮವಾದ ಮೇಲೆ ಅದನ್ನು ನಿರ್ದೇಶಿಸುವುದರ ಬಗ್ಗೆ ಉಪೇಂದ್ರ ಅವರೇ ನಿಶ್ಚಯಿಸಲಿದ್ದಾರೆ ಎಂದು ತಿಳಿಸುತ್ತವೆ ಮೂಲಗಳು.
ಈ ಮಧ್ಯೆ ಉಪೇಂದ್ರ ಉದಯ್ ಪ್ರಕಾಶ್ ನಿರ್ದೇಶನದ 'ಡಾ. ಮೋದಿ' ಮತ್ತು ನಾಗಣ್ಣ ನಿರ್ದೇಶನದ 'ಕನ್ನೇಶ್ವರ' ಸಿನೆಮಾಗಳಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಅವರು ಸದ್ಯಕ್ಕೆ ನಿರ್ದೇಶಕರಾದ ಮಂಜು ಮಾಂಡವ್ಯ ಮತ್ತು ಶಶಾಂಕ್ ಸಿನೆಮಾಗಳಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನೆಮಾಗಳಿಗೆ ಸ್ಕ್ರಿಪ್ಟ್ ಸಿದ್ಧವಾಗುತ್ತಿವೆ.
ಉಪೇಂದ್ರ ಅವರ ಮುಂದಿನ ಚಿತ್ರ 'ಉಪ್ಪಿ ಮತ್ತೆ ಹುಟ್ಟಿ ಬಾ- ಇಂತಿ ಪ್ರೇಮ' ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್, ರೇ ರೆಕಾರ್ಡಿಂಗ್ ಕಾರ್ಯಗಳು ಮುಂದುವರೆದಿವೆ. ಶೀಘ್ರದಲ್ಲೇ ಬಿಡುಗಡೆಯಾಗಬೇಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos