ಬೆಂಗಳೂರು: 'ಡೈರೆಕ್ಟರ್ಸ್ ಸ್ಪೆಷಲ್' ಜೋಡಿ ನಟ ಧನಂಜಯ್ ಮತ್ತು ನಿರ್ದೇಶಕ ಗುರುಪ್ರಸಾದ್ 'ಎರಡನೇ ಸಲ' ಸಿನೆಮಾದ ಮೂಲಕ ಹಿಂದಿರುಗಿದ್ದಾರೆ. ಮೂರು ವರ್ಷದ ಹಿಂದೆಯೇ ಯೋಜಿಸಲಾಗಿದ್ದ ಸಿನೆಮಾ ಈಗ ಈ ವಾರ ತೆರೆ ಕಾಣಲಿದೆ.
ಈ ಬಾರಿ ನಿರ್ದೇಶಕ ಗುರುಪ್ರಸಾದ್ ಜೊತೆಗೆ ಕೆಲಸ ಮಾಡುವಾಗ ಅವರ ಶೈಲಿ ಸಂಪೂರ್ಣ ಬದಲಾಗಿತ್ತು ಎಂದು ವಿವರಿಸುವ ನಟ "'ಡೈರೆಕ್ಟರ್ಸ್ ಸ್ಪೆಷಲ್' ಸಿನೆಮಾ ಚಿತ್ರೀಕರಣ ಸಮಯದಲ್ಲಿ ಗುರುಪ್ರಸಾದ್ ಪ್ರತಿ ಶಾಟ್, ಸಂಭಾಷಣೆ ಮತ್ತು ಎಲ್ಲದರ ಬಗ್ಗೆ ಅತಿ ಹೆಚ್ಚು ನಿರ್ಧಿಷ್ಟವಾಗಿದ್ದರು ಆದರೆ 'ಎರಡನೇ ಸಲ' ಚಿತ್ರೀಕರಣದ ವೇಳೆ ಹಾಗಿರಲಿಲ್ಲ" ಎನ್ನುತ್ತಾರೆ.
"ಈ ಬಾರಿ ಅವರು ಹೆಚ್ಚು ಹೊಂದಿಕೊಳ್ಳುತ್ತಿದ್ದರು ಮತ್ತು ಹೆಚ್ಚೆಚ್ಚು ಹಾಸ್ಯಮಯವಾಗಿದ್ದರು. ಸ್ಥಳದಲ್ಲಿಯೇ ಸಾಕಷ್ಟು ರೀತಿಯಲ್ಲಿ ಉತ್ತಮ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು" ಎನ್ನುತ್ತಾರೆ ಈ ಸಿನೆಮಾದ ನಾಯಕನಟ ಧನಂಜಯ್.
ಈಗಾಗಲೇ ಬಿಡುಗಡೆಯಾಗಿರುವ ಸರಣಿ ಟ್ರೇಲರ್ ಗಳು 'ಡಬಲ್ ಮೀನಿಂಗ್' ಹಾಸ್ಯ ಸಂಭಾಷಣೆಗಾಗಿ ಬಹಳಷ್ಟು ಪ್ರಖ್ಯಾತವಾಗಿವೆ. ಇದಕ್ಕೆ ಪ್ರತಿ ನುಡಿಯುವ ಧನಂಜಯ್ "ಇವುಗಳನ್ನು ಗುರುಪ್ರಸಾದ್ ಅವರು ತಾಂತ್ರಿಕ ಜೋಕ್ ಗಳು ಎಂದು ಕರೆಯುತ್ತಾರೆ. ಇವುಗಳಲ್ಲಿ ಡಬಲ್ ಮೀನಿಂಗ್ ಇರಬಹುದು ಆದರೆ ಅಶ್ಲೀಲ ಅಲ್ಲ" ಎನ್ನುತ್ತಾರೆ.
"'ಎರಡನೇ ಸಲ' ಸಿನೆಮಾದಲ್ಲಿ ತಾಯಿ ಮತ್ತು ಮಗನ ಭಾವನಾತ್ಮಕ ಕಥೆ ಇದೆ. ಲಕ್ಷ್ಮಿ ತಾಯಿಯ ಪಾತ್ರ ಮಾಡಿದ್ದು ಇಡೀ ನಿರೂಪಣೆಗೆ ಅದು ಬಲ ತಂದಿದೆ. ಸ್ವಾಭಾವಿಕ ನಟನೆಯಿಂದ ಅವರು ಎಂದೆಂದಿಗೂ ಹಸಿರಾಗಿರುವ ನಟಿ" ಎನ್ನುತ್ತಾರೆ ಧನಂಜಯ್,.
ಹಲವು ವಿಭಿನ್ನ ಪಾತ್ರಗಳ ಜೊತೆಗೆ ಪ್ರಯೋಗ ನಡೆಸಿರುವ ಧನಂಜಯ್ ಒಂದು ರೀತಿಯ ಸಿನೆಮಾಗಳಿಗೆ ಸೀಮಿತಗೊಳಿಸಿಕೊಳ್ಳುವುದು ಸುಲಭದ ದಾರಿ ಎನ್ನುತ್ತಾರೆ "ಬಹುಮುಖ ನಟನೆಗೆ ಅಷ್ಟೇನೂ ಪ್ರಶಂಸೆ ನನಗೆ ಸಿಗುತ್ತಿಲ್ಲ ಮತ್ತು ಇದು ನನ್ನನ್ನು ಎಲ್ಲಿಗೂ ಕೊಂಡೊಯ್ಯುತ್ತಿಲ್ಲ" ಎಂಬ ನಿರಾಶೆಯನ್ನು ವ್ಯಕ್ತಪಡಿಸುತ್ತಾರೆ.
"ಒಂದು ರೀತಿಯ ಶೈಲಿಯ ಸಿನೆಮಾದಲ್ಲಿ ನನ್ನನು ನಾನು ಸಾಬೀತುಪಡಿಸಿಕೊಳ್ಳಬೇಕು ಮತ್ತು ಅದರ ಸುತ್ತಲೇ ನನ್ನ ಜನಪ್ರಿಯತೆ ಬೆಳೆಯಬೇಕು. ಇವೆಲ್ಲವನ್ನೂ ಹೇಳಿ ಕೊನೆಗೆ ನಾನು ಮಾಸ್ ಶೈಲಿಯ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ" ಎನ್ನುತ್ತಾರೆ.
ಯೋಗೇಶ್ ನಾರಾಯಣ್ ನಿರ್ಮಿಸಿರುವ 'ಎರಡನೇ ಸಲ' ಸಿನೆಮಾದಲ್ಲಿ ಸಂಗೀತಾ ಭಟ್ ನಾಯಕ ನಟಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos