ಬೆಂಗಳೂರು: ಸಿನೆಮಾ ಹಿನ್ನಲೆ ಇರುವವರಿಗೆ ಕೀರ್ತಿ ಸುಲಭವಾಗಿ ದಕ್ಕುತ್ತದೆ ಎಂಬುದು ಸತ್ಯಕ್ಕೆ ದೂರ ಎನ್ನುತ್ತಾರೆ ಸುಮಂತ್ ಶೈಲೇಂದ್ರ. ನಟನ ವೃತ್ತಿಜೀವನ ಅವನ ಆಯ್ಕೆ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ನಟ.
ನಟನ ತಂದೆ ಶೈಲೇಂದ್ರ ಬಾಬು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ಮಾಪಕರು, ಆದರೆ ಸುಮಂತ್ ಬೇರೆಯದೇ ದಾರಿ ತುಳಿಯಲು ನಿಶ್ಚಯಿಸಿದವರು. ಐದು ಸಿನೆಮಾಗಳ ನಟ ಈಗ 'ಲೀ'ನೊಂದಿಗೆ ಹಿಂದಿರುಗಿದ್ದಾರೆ. ಈ ವಾರ ಚಲನಚಿತ್ರಮಂದಿರಗಳಲ್ಲಿ 'ಲೀ' ಬಿಡುಗಡೆಯಾಗಲಿದೆ.
ಸಿಟಿ ಎಕ್ಸ್ಪ್ರೆಸ್ ನೊಂದಿಗೆ ಮಾತನಾಡಿದ ನಟ, 'ಲೀ' ನಂತರ ಕಮರ್ಷಿಯಲ್ ಮಾದರಿ ಸಿನೆಮಾಗಳಿಂದ ಅಲ್ಪ ವಿರಾಮ ಪಡೆಯುವುದಾಗಿ ತಿಳಿಸಿ ಅಚ್ಚರಿ ಮೂಡಿಸುತ್ತಾರೆ. "ಗಾಂಧಿನಗರದಲ್ಲಿ ನಮ್ಮ ಕಚೇರಿ ಇರುವುದರಿಂದ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗ ಕಂಡಿದ್ದೇನೆ. ಹಲವಾರು ನಿರ್ಮಾಪಕರು, ವಿತರಕರು ಮತ್ತು ನಿರ್ದೇಶಕರುಗಳನ್ನು ಭೇಟಿಯಾದ ನಂತರ ಅವರಿಂದ ಸಿನೆಮಾ ಆಯ್ಕೆಯ ಬಗ್ಗೆ ಸಲಹೆ ಪಡೆದೆ, ನಂತರ ನನ್ನ ಮೊದಲೆರಡು ಸಿನೆಮಾಗಳಾದ 'ಆಟ' ಮತ್ತು 'ದಿಲ್ವಾಲಾ'ದಲ್ಲಿ ನಟಿಸಿದೆ. ಅದರ ನಂತರ ಮತ್ತೊಂದಷ್ಟು ಮಾಸ್ ಸಿನೆಮಾಗಳಲ್ಲಿ ನಟಿಸಿದೆ. ಒಂದು ದಿನ, ನಾನೆತ್ತ ಸಾಗುತ್ತಿದ್ದೇನೆ ಎಂದು ಕುಳಿತು ಚಿಂತಿಸಿದೆ, ನಾನು ಮಾಸ್ ಹೀರೊ ಆಗಬೇಕೆ ಅಥವಾ ಒಳ್ಳೆಯ ವಿಷಯ-ವಸ್ತು ಇರುವ ಸಿನೆಮಾಗಳಲ್ಲಿ ನಟಿಸಬೇಕೇ ಎಂದು ಚಿಂತಿಸಿದೆ.
ಸಾಕಷ್ಟು ಚಿಂತಿಸಿದ ನಂತರ ಒಳ್ಳೆಯ ವಿಷಯ-ವಸ್ತು ಇರುವ ಸಿನೆಮಾಗಳಲ್ಲಿ ನಟಿಸಬೇಕು ಎಂದು ನಿಶ್ಚಯಿಸಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಸಿನೆಮಾಗಳು ಒಳ್ಳೆಯ ಹೆಸರು ಮಾಡುತ್ತಿವೆ. 'ಲೂಸಿಯಾ', 'ರಾಮ ರಾಮ ರೇ', 'ತಿಥಿ' ಮತ್ತು ಇತ್ತೀಚಿನ 'ಕಿರಿಕ್ ಪಾರ್ಟಿ' ಇಂತಹ ಸಿನೆಮಾಗಳು. ನಾನು ಇದೆ ಹಾದಿ ತುಳಿಯಬೇಕೆಂದಿದ್ದೇನೆ. ಇದು ಹಸಿರಾಗಿರುತ್ತದೆ" ಎಂದು ವಿವರಿಸುತ್ತಾರೆ ಸುಮಂತ್.
'ಲೀ' ಸಿನೆಮಾದ ಪಾತ್ರಕ್ಕೋಸ್ಕರ ಅದನ್ನು ಆಯ್ಕೆ ಮಾಡಿಕೊಂಡೆ ಎಂದು ತಿಳಿಸುವ ಸುಮಂತ್ "ಇಲ್ಲಿ ಹೀರೊ ಹಲವಾರು ಸವಾಲುಗಳನ್ನು ಎದುರಿಸುತ್ತಾನೆ.... ನಾನಿಲ್ಲಿ ಮಾನಸಿಕ ಅಸ್ವಸ್ಥ, ಭಿಕ್ಷುಕ, ಲವರ್ ಬಾಯ್ ಮತ್ತು ಆಕ್ಷನ್ ಹೀರೊ ಛಾಯೆಗಳನ್ನು ಪೋಷಿಸಿದ್ದೇನೆ. ಪ್ರತಿ ಛಾಯೆಗೂ ನನ್ನ ಆಂಗಿಕ ಭಾಷೆ ಬದಲಾಗಬೇಕಿತ್ತು. ಪ್ರತಿಯೊಂದಕ್ಕೂ ಮೂರೂ ತಿಂಗಳು ಹಿಡಿಯಿತು" ಎನ್ನುತ್ತಾರೆ ಸುಮಂತ್.
ನಭಾ ನಟೇಶ್ ಸುಮಂತ್ ಎದುರು 'ಲೀ'ನಲ್ಲಿ ನಟಿಸಿದ್ದಾರೆ.