ಬೆಂಗಳೂರು: ರಕ್ಷಿತ್ ಈಗ ಚಾಲ್ತಿಯಲ್ಲಿರುವ ಕನ್ನಡ ನಟ ಮತ್ತು ಕನ್ನಡ ಚಿತ್ರರಂಗದ ಮುಂದಿನ ಸ್ಟಾರ್ ಎಂದೇ ಅವರ ಬಗ್ಗೆ ಹೇಳಲಾಗುತ್ತಿದ್ದು, ಅವರ ನಟನೆಯ 'ಕಿರಿಕ್ ಪಾರ್ಟಿ' ಯಶಸ್ಸಿನ ಬೆನ್ನಲ್ಲಿಯೇ ಹಲವು ಯೋಜನೆಗಳು ಘೋಷಣೆಯಾಗುತ್ತಿವೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಒಟ್ಟಿಗೆ ನಟಿಸಿದ್ದ ಕನ್ನಡ ಹಿರಿಯ ನಟ ಅನಂತನಾಗ್ ಮತ್ತು ರಕ್ಷಿತ್ ಶೆಟ್ಟಿ ಜೋಡಿ, ನಿರ್ದೇಶಕನಾಗಿ ಭಡ್ತಿ ಪಡೆದಿರುವ ಸಂಕಲನಕಾರ ಸಚಿನ್ ಅವರ ಚೊಚ್ಚಲ ಚಿತ್ರದಲ್ಲಿ ಮತ್ತೆ ಒಂದಾಗಲಿದ್ದಾರೆ.
ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸಿನೆಮಾದ ಪ್ರಚಾರ ಪ್ರವಾಸ ಮುಗಿಸಿ ಬಂದ ಮೇಲೆ, ಫೆಬ್ರವರಿಯಿಂದ ನೂತನ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಅನಂತ ನಾಗ್ ಅವರ ಜೊತೆಗೆ ಮಾತುಕತೆ ಮುಗಿದಿದ್ದು, ಅವರು ಸ್ಕ್ರಿಪ್ಟ್ ಒಪ್ಪಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿರುವುದು.
ಈ ಸಿನೆಮಾದಲ್ಲಿ ಮೊದಲ ಬಾರಿಗೆ ಶಾನ್ವಿ ಶ್ರೀವಾಸ್ತವ ರಕ್ಷಿತ್ ಶೆಟ್ಟಿ ಎದುರು ನಟಿಸಲಿದ್ದಾರೆ. ಉಳಿದ ತಾರಾಗಣವನ್ನು ಅಂತಿಮಗೊಳಿಸಲು ಸಿದ್ಧತೆ ನಡೆಸಿದ್ದು, ತಂದೆ ಮಗನ ಪಾತ್ರಕ್ಕೆ ಮತ್ತೆ ಅನಂತ್-ರಕ್ಷಿತ್ ಜೋಡಿ ಒಂದಾಗಿರುವುದರಿಂದಲೇ ಸಿನೆಮಾ ಸುತ್ತ ಕುತೂಹಲ ಮೂಡಿಸಲು ಸಾಧ್ಯವಾಗಿದೆ.
ಎಚ್ ಕೆ ಪ್ರಕಾಶ್, ಶ್ರೀದೇವಿ ಎಂಟರ್ಟೈನರ್ಸ್ ಬ್ಯಾನರ್ ಅಡಿ ಸಿನೆಮಾ ನಿರ್ಮಿಸಲಿದ್ದಾರೆ. ೨೦೧೫ ರಲ್ಲಿ ಇವರು ನಿರ್ಮಿಸಿದ್ದ 'ರಂಗಿತರಂಗ' ಭಾರಿ ಯಶಸ್ಸು ಕಂಡು ವಿಶ್ವಪರ್ಯಟನೆ ಕೂಡ ನಡೆಸಿತ್ತು.
ಮನೋಹರ್ ಜೋಶಿ ಛಾಯಾಗ್ರಹಣ ನಿರ್ವಹಿಸಲಿದ್ದು, ಚರಣ್ ರಾಜ್ ಅವರ ಸಂಗೀತ ಒದಗಿಸಲಿದ್ದಾರೆ. ಸಿನೆಮಾ ಶೀರ್ಷಿಕೆ ಇನ್ನು ಅಂತಿಮಗೊಳ್ಳಬೇಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos