'ವೀರ ರಣಚಂಡಿ'ಯಲ್ಲಿ ನಟಿ ರಾಗಿಣಿ ದ್ವಿವೇದಿ
ಬೆಂಗಳೂರು: 'ವೀರ ರಣಚಂಡಿ' ಸಿನೆಮಾದ ಜೊತೆಗಿನ ನಟಿ ರಾಗಿಣಿ ದ್ವಿವೇದಿ ಅವರ ಪಯಣ ಸುಲಭದ್ದಾಗಿರಲಿಲ್ಲ. ಆದರೆ ಸಿನೆಮಾ ಜೊತೆ ಅಚಲವಾಗಿ ಅವರು ನಿಂತಿದ್ದು ಕೊನೆಗೂ ಫಲ ನೀಡಿದೆ. ಈ ವಾರ ಸಿನೆಮಾ ತೆರೆ ಕಾಣುತ್ತಿದೆ.
೨೦೧೪ ರಲ್ಲಿಯೇ ಈ ಸಿನೆಮಾದ ಕೆಲಸಗಳು ಪ್ರಾರಂಭವಾದರೂ ಹಲವು ಬಾರಿ ತೊಡಕುಂಟಾಗಿತ್ತು. ರಾಗಿಣಿ ಅವರ ಉತ್ಸಾಹ ಬತ್ತಿದ್ದರೆ 'ವೀರ ರಣಚಂಡಿ' ನೆನೆಗುದಿಗೆ ಬೀಳುತ್ತಿತ್ತು. ಆನಂದ್ ಪಿ ರಾಜು ನಿರ್ದೇಶನದ ಈ ಮಹಿಳಾ ಕೇಂದ್ರಿತ ಚಿತ್ರ ರಾಗಿಣಿ ಅವರ ಪ್ರದರ್ಶನದ ಮೇಲೆ ನಿಂತಿದ್ದು, ಈಗ ಅವರು ಪ್ರಚಾರದಲ್ಲಿಯೂ ಭಾಗಿಯಾಗಿದ್ದಾರೆ.
"ನಾನು ನನ್ನ ಜವಾಬ್ದಾರಿಗಳಿಂದ ಎಂದಿಗೂ ನುಣುಚಿಕೊಂಡಿಲ್ಲ" ಎನ್ನುವ ನಟಿ "ಅದು ಎಷ್ಟೇ ಬಳಲಿಕೆ ತರಲಿ.. ಅದರ ಬಗ್ಗೆ ನಾನು ಗೊಣಗುವುದಿಲ್ಲ. ಇದು ನಿರ್ದೇಶಕರಿಗೆಷ್ಟೋ ಅಷ್ಟೇ ನನ್ನ ಕೂಸು ಕೂಡ.
"ಆದರೆ ನಮ್ಮ ನಿರ್ದೇಶಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಆದುದರಿಂದ ಅವರು ಈಗ ಇಲ್ಲಿ ಇರಲಾಗುತ್ತಿಲ್ಲ. ಇದು ದುಃಖದ ಸಂಗತಿ, ಆದರೆ ಯಾರಾದರೂ ಜವಾಬ್ದಾರಿ ಹೊರಬೇಕು ಆದುದರಿಂದ ನಾನೇ ಮುಂದಾದೆ. ಅಲ್ಲದೆ ಇದು ಮಹಿಳಾ ಕೇಂದ್ರಿತ ಚಿತ್ರವಾಗಿರುವುದರಿಂದ ನಾನೇ ಸ್ವಯಂಪ್ರೇರಿತಳಾಗಿ ಪ್ರಚಾರಕ್ಕೆ ಮುಂದಾಗಿದ್ದೇನೆ" ಎನ್ನುತ್ತಾರೆ ನಟಿ ರಾಗಿಣಿ.
'ರಣ ಚಂಡಿ' ಚಿತ್ರೀಕರಣದ ವೇಳೆ ಸಾಕಷ್ಟು ಏರಿಳಿತಗಳನ್ನು ಕಂಡಿರುವುದಾಗಿ ಒಪ್ಪಿಕೊಳ್ಳುವ ನಟಿ "ಇದು ಆಕ್ಷನ್ ಮನರಂಜನಾ ಚಿತ್ರ. ಚಿತ್ರೀಕರಣ ವೇಳೆಯಲ್ಲಿ ಆಕ್ಷನ್ ದೃಶ್ಯಗಳನ್ನು ಮಾಡುವಾಗ ಹಲವು ಬಾರಿ ಗಾಯಗೊಂಡೆ. ನಾನು ಎರಡು ತಿಂಗಳ ಕಾಲ ಹಾಸಿಗೆ ಹಿಡಿದು ಮಲಗಬೇಕಾಯಿತು. ನಾನು ಅನುಭವಿಸಿದ ನೋವು ಬಹಳಷ್ಟು ಜನಕ್ಕೆ ತಿಳಿದಿಲ್ಲ. ಆದರೆ ನನ್ನ ತೂಕ ಹೆಚ್ಚಾಗಿರುವುದರ ಬಗ್ಗೆ ಮಾತನಾಡುತ್ತಾರೆ. ಆದರೆ ಇಂತಹ ಕೆಟ್ಟ ಸಂಗತಿಗಳನ್ನು ಹುಡುಕಿ ಕುಳಿತವರು ಕೆಲವರಷ್ಟೇ. ಆದರೆ ಅವರ ಈ ಮಾತುಗಳು ಮತ್ತೆ ಕುದುರೆ ಏರಿ ಕೂರಲು ಛಲ ನೀಡಿತು" ಎನ್ನುತ್ತಾರೆ ರಾಗಿಣಿ.
ಈ ಸಿನೆಮಾದಲ್ಲಿ ತಾವು ನಿರ್ವಹಿಸಿರುವ ಆಕ್ಷನ್ ದೃಶ್ಯಗಳ ಬಗ್ಗೆ ಆತ್ಮ ವಿಶ್ವಾಸ ತೋರುವ ನಟಿ ಅಭಿಮಾನಿಗಳು ಇದನ್ನು ಇಷ್ಟಪಡಲಿದ್ದಾರೆ ಎನ್ನುತ್ತಾರೆ. "ನನ್ನ ಸ್ಟಂಟ್ ಗಳನ್ನೂ ಅವರು ನೋಡಬೇಕು" ಎನ್ನುತ್ತಾರೆ ರಾಗಿಣಿ.