ನಟ ಕಪಿಲ್ ಶರ್ಮಾ ಅವರು ಹಾಸ್ಯ ನಟ ಸುನಿಲ್ ಗ್ರೋವರ್
ಮುಂಬೈ: ಹಾಸ್ಯ ನಟರಿಬ್ಬರ ನಡುವೆ ನಡೆದಿರುವ ಗಲಾಟೆ ಇದೀಗ ಬಹು ಚರ್ಚೆಗೆ ಕಾರಣವಾಗಿದೆ. ಸಾಕಷ್ಟು ಸುದ್ಗಿಗಳ ಬಳಿಕ ನಟ ಕಪಿಲ್ ಶರ್ಮಾ ಅವರು ಹಾಸ್ಯ ನಟ ಸುನಿಲ್ ಗ್ರೋವರ್ ಅವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿ ಚರ್ಚೆ ಹಾಗೂ ಸುದ್ದಿಗಳಿಗೆ ಅಂತ್ಯ ಹಾಡುವ ಪ್ರಯತ್ನಗಳನ್ನು ಮಾಡಿದ್ದರು.
ಆದರೆ, ಹಾಸ್ಯ ನಟರಿಬ್ಬರ ನಡುವಿನ ಮನಸ್ತಾಪ ಇಷ್ಟಪಕ್ಕೆ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಪಿಲ್ ಶರ್ಮಾ ಕ್ಷಮೆಯಾಚನೆ ಮಾಡಿದ ಬಳಿಕ ಇದಕ್ಕೆ ಸಾಮಾಜಿಕ ಜಾಲತಾಣದಲ್ಲೇ ಪ್ರತಿಕ್ರಿಯೆ ನೀಡಿರುವ ಸುನಿಲ್ ಗ್ರೋವರ್ ಅವರು, ನೀನು ನನಗೆ ಬಳ ನೋವು ಮಾಡಿದ್ದೀಯಾ...ದೇವರಂತೆ ನಟಿಸುವುದನ್ನು ಬಿಡು...ನಿನ್ನೊಂದಿಗೆ ನಾನು ಕೆಲಸ ಮಾಡುವ ಮೂಲಕ ಸಾಕಷ್ಟು ಕಲಿತುಕೊಂಡಿದ್ದೇನೆ. ನಿನಗೆ ಒಂದು ಸಲಹೆಯನ್ನು ನೀಡಲು ಇಚ್ಛಿಸುತ್ತೇನೆ. ಪ್ರಾಣಿಗಳನ್ನು ಬಿಟ್ಟು ಒಬ್ಬ ಮನುಷ್ಯನಾಗಿ ಮತ್ತೊಬ್ಬ ಮನುಷ್ಯನನ್ನು ಗೌರವಿಸುವುದನ್ನು ಕಲಿತುಕೋ ಎಂದು ಹೇಳಿದ್ದಾರೆ.
ನಿನ್ನಂತೆಯೇ ಎಲ್ಲರೂ ಯಶಸ್ವಿಗಳಿಸಲು ಸಾಧ್ಯವಿಲ್ಲ. ನಿನ್ನಲ್ಲಿರುವ ಪ್ರತಿಭೆ ಎಲ್ಲರಲ್ಲೂ ಇರಲೂ ಸಾಧ್ಯವಿಲ್ಲ. ಎಲ್ಲರೂ ನಿನ್ನಂತೆಯೇ ಪ್ರತಿಭೆಯುಳ್ಳವರಾಗಿದ್ದರೆ, ನನಗೆ ಯಾರು ಬೆಲೆ ಕೊಡುತ್ತಿದ್ದರು. ಬೇರೆಯವರ ಅಸ್ತಿತ್ವತೆಗೂ ಕೃತಜ್ಞತೆಗಳನ್ನು ಸಲ್ಲಿಸು. ನಿನ್ನೆ ತಪ್ಪುಗಳನ್ನು ಯಾರಾದರೂ ಸರಿ ಮಾಡಲು ಬಂದರೆ, ಅವರನ್ನು ನಿಂದಿಸಬೇಡ. ಮಹಿಳೆಯ ಮುಂದೆ ಕೆಟ್ಟ ಭಾಷೆ ಬಳಕೆಯನ್ನು ನಿಲ್ಲಿಸು. ನೀನ್ನೊಂದಿಗೆ ಸ್ಟಾರ್ ನಟರನ್ನು ಕರೆದುಕೊಂಡು ಹೋಗುವಾಗ ಮಹಿಳೆಯರು ಏನನ್ನೂ ಮಾಡಲು ಸಾಧ್ಯವಿಲ್ಲ.
ಅಕಸ್ಮಾತಾಗಿ ಆ ಮಹಿಳೆಯಲು ನಿನ್ನೊಂದಿಗೆ ಪ್ರಯಾಣ ಮಾಡುತ್ತಿದ್ದಾರಷ್ಟೆ. ಅದು ನಿನ್ನೆ ಕಾರ್ಯಕ್ರಮವಾಗಿತ್ತು ಎಂಬುದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ನಿನ್ನ ಕಾರ್ಯಕ್ರಮದಿಂದ ಯಾರನ್ನು, ಯಾವಾಗ ಬೇಕಾದರೂ ತೆಗೆದು ಹಾಕುವ ಶಕ್ತಿ ನಿನಗಿದೆ. ನೀನು ಅತ್ಯಂತ ಬುದ್ಧಿವಂತಿಕೆಯುಳ್ಳ ವ್ಯಕ್ತಿ. ನಿನ್ನ ಕ್ಷೇತ್ರದಲ್ಲಿ ನೀನು ಉತ್ತಮವಾಗಿದ್ದೀಯ. ಆದರೆ, ದೇವರಂತೆ ನಟಿಸಬೇಡ. ನಿನ್ನನ್ನು ನೀನು ಹುಷಾರಾಗಿ ನೋಡಿಕೋ...ನಿನ್ನ ಜೀವನದಲ್ಲಿ ಮತ್ತಷ್ಟು ಯಶಸ್ಸು ಹಾಗೂ ಖ್ಯಾತಿ ಲಭಿಸಲಿ ಎಂದು ಆಶಿಸುತ್ತೇನೆಂದು ಗ್ರೋವರ್ ಹೇಳಿಕೊಂಡಿದ್ದಾರೆ.
ಅಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಮುಗಿಸಿ ವಿಮಾನದಲ್ಲಿ ಹಿಂತಿರುಗಿ ಬರುತ್ತಿದ್ದ ವೇಳೆ ಕಪಿಲ್ ಹಾಗೂ ಸುನಿಲ್ ಇಬ್ಬರ ಮಧ್ಯೆ ಜಗಳವಾಗಿದ್ದು ಎಂದು ಹೇಳಲಾಗುತ್ತಿತ್ತು. ಮದ್ಯಪಾನ ಮಾಡಿದ್ದ ಕಪಿಲ್ ಶರ್ಮಾ ಅವರು ಸುನಿಲ್ ಅವರ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ, ವಿಮಾನದಲ್ಲೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ವರದಿಗಳು ತಿಳಿಸಿದ್ದವು.
ಮಾಧ್ಯಮಗಳ ವರದಿಗಳ ಬಳಿಕ ಕೊನೆಗೂ ಮೌನ ಮುರಿದಿದ್ದ ಕಪಿಲ್ ಶರ್ಮಾ ಅವರು ಸುನಿಲ್ ಗ್ರೋವರ್ ಅವರಿಗೆ ಕ್ಷಮೆಯಾಚಿಸಿದ್ದರು. 'ಪಾಜಿ' ಸುನೀಲ್ ಗ್ರೋವರ್ ನಿಮಗೆ ನೋವು ಮಾಡಿದ್ದರೆ ನನ್ನಲ್ಲಿ ಕ್ಷಮೆ ಇರಲಿ. ನಾನು ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಿಮಗೆ ಗೊತ್ತು. ಈ ಘಟನೆಯಿಂದ ನನಗೂ ಅಸಮಧಾನವಾಗಿದೆ. ಜೀವನದಲ್ಲಿ ಖುಷಿಯಾಗಿರುವ ವೇಳೆ ಈ ಸುದ್ದಿ ಬಂದಿದೆ. ಗಲಾಟೆ ವಿಚಾರ ನನ್ನನ್ನು ಗಾಬರಿಗೊಳಿಸಿದೆ. ಈ ಸುದ್ದಿ ಎಲ್ಲಿಂದ ಬಂತು ಮತ್ತೆ ಇದಕ್ಕೆ ಏನು ಕಾರಣ ಎಂದು ತಿಳಿದುಕೊಂಡ ನಂತರ ಉತ್ತರ ನೀಡಬೇಕು. ಕೆಲವರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಸುನೀಲ್ ನಾನು ಒಟ್ಟಿಗೆ ಇರುತ್ತೇವೆ. ಒಟ್ಟಿಗೆ ಪ್ರಯಾಣ ಮಾಡುತ್ತೀವಿ. ವರ್ಷಕ್ಕೊಮ್ಮೆ ಮಾತ್ರ ನನ್ನ ಸಹೋದರನನ್ನು ಭೇಟಿ ಮಾಡುತ್ತೇನೆ. ಆದರೆ ನಿನ್ನನ್ನು ದಿನಂಪ್ರತಿ ಭೇಟಿ ಮಾಡುತ್ತಿರುತ್ತೇನೆ. ಸುನೀಲ್ ನನ್ನ ಸಹೋದರನಿದ್ದಂತೆ. ನಾನು ನಿನ್ನನ್ನು ಗೌರವಿಸುತ್ತೇನೆಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos