ಸಿನಿಮಾ ಸುದ್ದಿ

ರಂಗಭೂಮಿಯತ್ತ ಮರಳಿದ ನಟ ಧನಂಜಯ್

Guruprasad Narayana
ಬೆಂಗಳೂರು: ರಂಗಭೂಮಿಯಿಂದ ವೃತ್ತಿ ಜೀವನ ಪ್ರಾರಂಭಿಸಿ ಬೆಳ್ಳಿ ತೆರೆಗೆ ಆಗಮಿಸಿದ ನಟ ಧನಂಜಯ್, ಏಪ್ರಿಲ್ ೨೯ ರಂದು ವಾಷಿಂಗ್ಟನ್ ಡಿಸಿಯ ವರ್ಜಿನಿಯಾ ರಂಗೋತ್ಸವದಲ್ಲಿ ಅವರ ಏಕಪಾತ್ರಾಭಿನಯ ನಾಟಕ 'ಶ್ರದ್ಧಾ'ದಲ್ಲಿ ಅಭಿನಯಿಸಿದ್ದಾರೆ. 
ಈ ಸಂತಸವನ್ನು ಹಂಚಿಕೊಂಡ ನಟ "ಏಳು ವರ್ಷಗಳ ನಂತರ ನಾನು ಮತ್ತೆ ರಂಗಭೂಮಿ ವೇದಿಕೆ ಹತ್ತಿದ್ದೇನೆ. ಇದು ನನ್ನ ರಂಗಭೂಮಿ ದಿನಗಳನ್ನು ಮರುಕಳಿಸಿತು. ನಾನು ಭಾರತಕ್ಕೆ ಹಿಂದಿರುಗಿದ ಮೇಲೆ ಮತ್ತೆ ನನ್ನ ರಂಗಭೂಮಿ ಚಟುವಟಿಕೆಗಳನ್ನು ಪ್ರಾರಂಭಿಸಲಿದ್ದೇನೆ" ಎನ್ನುತ್ತಾರೆ ಧನಂಜಯ್. 
ಈಗ ಜರ್ಮನಿಯಲ್ಲಿ ಪ್ರವಾಸದಲ್ಲಿರುವ ನಟ, ದಶಕದ ಹಿಂದೆ ರಂಗಭೂಮಿಯಲ್ಲಿ ತರಬೇತಿ ನೀಡಿದ ಅವರ ಗುರು ಕ್ರಿಶ್ಚಿಯನ್ ಸ್ಟುಕಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ. "ಕ್ರಿಶ್ಚಿಯನ್ ಭಾರತಕ್ಕೆ ಬಂದಾಗಲೆಲ್ಲಾ ಅವರನ್ನು ಭೇಟಿ ಮಾಡುತ್ತಿದ್ದೆ. ಈಗ ಜರ್ಮನಿಯಲ್ಲಿ ಅವರನ್ನು ಮತ್ತು ನನ್ನ ಗೆಳೆಯರನ್ನು ಭೇಟಿ ಮಾಡಲಿದ್ದೇನೆ" ಎನ್ನುತ್ತಾರೆ. 
ಈಗ ಧನಂಜಯ್ ಪ್ರವಾಸದ ಬಗ್ಗೆ ತಿಳಿದ ಮ್ಯೂನಿಚ್, ಆಮ್ಸ್ಟ್ರೆಡಾಂ ಮತ್ತು ಮಿಲನ್ ಕನ್ನಡ ಸಂಘದವರು, ನಟ ಪ್ರಧಾನ ಪಾತ್ರದಲ್ಲಿ ನಟಿಸಿರುವ 'ಅಲ್ಲಮ' ಸಿನೆಮಾ ಪ್ರದರ್ಶನವನ್ನು ಹಮ್ಮಿಕೊಂಡಿವೆ. "ಇದು ಸಿನೆಮಾ ಪ್ರಚಾರ ಅಲ್ಲ. ನಾನು ಪ್ರವಾಸದಲ್ಲಿದ್ದೇನೆ. ಇಲ್ಲಿನ ಗೆಳೆಯರು ಮತ್ತು ಕನ್ನಡಿಗರ ಜೊತೆಗೆ ಕಾಲ ಕಳೆಯಲಿದ್ದೇನೆ" ಎನ್ನುತ್ತಾರೆ. 
ಮೇ ೯ ರಂದು ಬೆಂಗಳೂರಿಗೆ ಹಿಂದಿರುಗಳಿರುವ ಧನಂಜಯ್, ಈ ವಾರ ಬಿಡುಗಡೆಯಾಗಲಿರುವ ಅವರ ಸಿನೆಮಾ 'ಹ್ಯಾಪಿ ನ್ಯೂ ಇಯರ್' ಸಿನೆಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.  
SCROLL FOR NEXT