ಸಿನಿಮಾ ಸುದ್ದಿ

ಕನಸಿನ ಪಯಣ ಆರಂಭಿಸಿದ 'ಗೋಧಿ ಬಣ್ಣ...' ಖ್ಯಾತಿಯ ನಿರ್ಮಾಪಕ ಪುಷ್ಕರ

Guruprasad Narayana
ಬೆಂಗಳೂರು: ತಮ್ಮ ಚೊಚ್ಚಲ ನಿರ್ಮಾಣದ ಸಿನೆಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'ವಿನ ಯಶಸ್ಸು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರಿಗೆ ಆತ್ಮವಿಶ್ವಾಸ ತಂದುಕೊಟ್ಟಿದೆ. ನಂತರ 'ಕಿರಿಕ್ ಪಾರ್ಟಿ' ಸಹನಿರ್ಮಾಪಕನಾಗಿ, 'ಜೀರ್ಜಿಂಬೆ'ಯನ್ನು ಕೂಡ ನಿರ್ಮಿಸಿದವರು ಪುಷ್ಕರ್, ಈಗ ನಿರ್ದೇಶನ ತಮ್ಮನ್ನು ಸೆಳೆದಿದ್ದು, ನನ್ನ ಪ್ಯಾಷನ್ ಇರುವುದು ಅಲ್ಲಿಯೇ ಎಂದಿದ್ದಾರೆ. 
"ನನ್ನ ಸೃಜನಶೀಲ ಪ್ರತಿಭೆಯ ಬಗ್ಗೆ ಎಂದಿಗೂ ನನ್ನಲ್ಲಿ ಆತ್ಮವಿಶ್ವಾಸ ಇತ್ತು ಮತ್ತು ಇದಕ್ಕೆ ಸಾಕ್ಷಿ ನಾನು ನಿರ್ಮಿಸಲು ಆಯ್ಕೆ ಮಾಡಿಕೊಂಡ ಸಿನೆಮಾಗಳು" ಎನ್ನುವ ಅವರು "ನಾನು ನಿರ್ಮಿಸಿದ ಸಿನೆಮಾಗಳು ಚಿತ್ರರಂಗದಲ್ಲಿ ಯಶಸ್ವಿಯಾಗಿ ಮುನ್ನುಗ್ಗುವುದಕ್ಕೆ ಅವಕಾಶ ನೀಡಿವೆ... ಯಾವುದು ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದರ ಬಗ್ಗೆ ನನಗೆ ಸೂಕ್ಷ್ಮಪ್ರಜ್ಞೆ ಇದೆ" ಎನ್ನುತ್ತಾರೆ ಅವರು. 
ಈಗ ತಮ್ಮ ಕನಸಿನ ಪಯಣದ ಹಾದಿಯಲ್ಲಿ ಹೆಜ್ಜೆ ಹಾಕಲು ಸಿದ್ಧರಾಗಿದ್ದು, ತಾವು ನಿರ್ದೇಶಿಸಲಿರುವ ಸಿನೆಮಾಗೆ ಸ್ಕ್ರಿಪ್ಟ್ ರಚಿಸಲು ತುಮಕೂರಿಗೆ ತೆರಳಿದ್ದಾರೆ. ಇದು ತ್ರಿಕೋನ ಪ್ರೇಮಕಥೆ ಎಂದು ತಿಳಿಸುವ ಅವರು ಒಬ್ಬ ಹೀರೊ ಮತ್ತು ಇಬ್ಬರು ಹೀರೋಯಿನ್ ಗಳು ಇರುವುದಾಗಿ ಹೇಳುತ್ತಾರೆ. ಈ ರೊಮ್ಯಾಂಟಿಕ್ ಹಾಸ್ಯ ಚಿತ್ರದ ಕಥೆ ಹೊಳೆದದ್ದು ಹೇಗೆ ಎಂಬ ಪ್ರಶ್ನೆಗೆ "ನಾನು ಹಲವು ಒಂದು ಸಾಲಿನ ಕಥೆಗಳನ್ನು ಚಿಂತಿಸಿದ್ದೆ, ಆದರೆ ವಾಣಿಜ್ಯ ದೃಷ್ಟಿಯಿಂದ ರೋಮ್ಯಾಂಟಿಕ್ ಹಾಸ್ಯ ಚಿತ್ರಗಳು ಹೆಚ್ಚಿನ ಜನಕ್ಕೆ ತಲುಪಬಲ್ಲವಾಗಿವೆ ಮತ್ತು ಎಲ್ಲ ರೀತಿಯ ಪ್ರೇಕ್ಷಕರನ್ನು ಸೆಳೆಯುತ್ತವೆ. ಆದುದರಿಂದ ಇದನ್ನೇ ಪ್ರಾರಂಭಿಸಿದೆ" ಎನ್ನುತ್ತಾರೆ. 
"ಸ್ಕ್ರಿಪ್ಟ್ ನ ಮೊದಲ ಆವೃತ್ತಿ ಮುಗಿಸಿದ್ದೇನೆ. ಹಾಗೆಯೇ ನಿರ್ಮಾಪಕನಾಗಿ ಸಮಾನಾಂತರವಾಗಿ ಮತ್ತೆರಡು ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಚಿತ್ರೀಕರಣ ಮುಂದುವರೆದಿದೆ. ಕಾರ್ತಿಕ್ ಸರಗೂರ್ ಅವರೊಂದಿಗಿನ ಸಿನೆಮಾ ಕೆಲಸ ಜೂನ್ ನಲ್ಲಿ ಪ್ರಾರಂಭವಾಗಲಿದೆ" ಎನ್ನುತ್ತಾರೆ. 
ನಿರ್ದೇಶಕನ ಟೋಪಿಯನ್ನು ಆತ್ಮವಿಶ್ವಾಸದಿಂದ ತೊಟ್ಟಿದ್ದರೂ, ನನ್ನ ಒಳ್ಳೆಯ ಗೆಳೆಯರಾದ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ಎಂ ರಾವ್ ಅವರ ಸಲಹೆಗಳು ನನ್ನ ಜೊತೆ ಇರಲಿವೆ ಎನ್ನುತ್ತಾರೆ "ನನ್ನ ಎಲ್ಲ ಯೋಜನೆಗಳನ್ನು ಅವರೊಂದಿಗೆ ಚರ್ಚಿಸಿದ್ದೇನೆ ಮತ್ತು ಸ್ಕ್ರಿಪ್ಟ್ ಅಂತಿಮವಾದ ಮೇಲೆ ಅವರ ಪ್ರತಿಕ್ರಿಯೆ ಪಡೆಯಲಿದ್ದೇನೆ" ಎನ್ನುತ್ತಾರೆ ಸ್ಯಾಂಡಲ್ ವುಡ್ ಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಲು ಉತುಸ್ಕರಾಗಿರುವ ಪುಷ್ಕರ. 
SCROLL FOR NEXT