ಬೆಂಗಳೂರು: ಪುಷ್ಕರ್ ಪ್ರೊಡಕ್ಷನ್ ನಲ್ಲಿ ಹಲವು ಸಿನಿಮಾ ನಿರ್ಮಾಣಗಳಲ್ಲಿ ನಿರತರಾಗಿರುವ ನಟ ರಕ್ಷಿತ್ ಶೆಟ್ಟಿ, ಸಚಿನ್ ನಿರ್ದೇಶನದ ಅವನೇ ಶ್ರೀಮನ್ ನಾರಾಯಣ ಸಿನಿಮಾಗೆ ಚಿತ್ರಕಥೆ ಬರೆಯುತ್ತಿದ್ದಾರೆ.
ಈ ಸಿನಿಮಾಗಾಗಿ ರಕ್ಷಿತ್ ಈಗಾಗಲೇ ಚಿತ್ರಕಥೆ ಪೂರ್ಣಗೊಳಿಸಿದ್ದು, ಕಲಾವಿದರು, ಚಿತ್ರದ ಮೂಹೂರ್ತ, ಲೋಕೇಶನ್ ಹುಡುಕಾಟ ಹಾಗೂ ಬಜೆಟ್ ಹಾಗೂ ಬಿಡುಗಡೆ ದಿನಾಂಕದ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ.
ಅವನೇ ಶ್ರೀಮನ್ ನಾರಾಯಣ ಬಿಗ್ ಬಜೆಟ್ ಸಿನಿಮಾವಾಗಿದ್ದು, ಸುಮಾರು 10 ಕೋಟಿ ರು ಅಂದಾಜು ಮಾಡಲಾಗಿದೆ, ಸಿನಿಮಾಗಾಗಿ ಎರಡು ಪಟ್ಟು ಬಂಡವಾಳ ಹೂಡಿಕೆ ಮಾಡಲು ನಿರ್ಮಾಪಕರು ಸಿದ್ದವಿದ್ದಾರೆ, ಏಕೆಂದರೆ ಸಿನಿಮಾದಿಂದ 75 ಕೋಟಿ ರು ವ್ಯವಹಾರ ನೀರಿಕ್ಷೆ ಮಾಡಲಾಗಿದೆ.
ಸೆನ್ನಾ ಹೆಗಡೆ ಅವರ ಚಿತ್ರದ ಮೂಹೂರ್ಥದಲ್ಲಿ ಪಾಲ್ಗೋಂಡಿದ್ದ ರಕ್ಷಿತ್ ಶೆಟ್ಟಿ, ಅವನೇ ಶ್ರೀಮನ್ ನಾರಾಯಣ ಸಿನಿಮಾ ಬಗ್ಗೆ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ವರ್ಷದ ಅಂತ್ಯದೊಳಗೆ ಸಿನಿಮಾ ಶೂಟಿಂಗ್ ಆರಂಭಿಸಲು ತಯಾರಿ ನಡೆಸಲಾಗುತ್ತಿದ್ದು, 2018ರ ಡಿಸೆಂಬರ್ ನಲ್ಲಿ ಚಿತ್ರ ರಿಲೀಸ್ ಆಗಲಿದೆ.
ಇದೊಂದು 80ರ ದಶಕದ ಕಥೆಯಾಗಿದ್ದು, ರಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಮರಾವತಿ ಎಂಬ ಕಾಲ್ಪನಿಕ ಪಟ್ಟಣದಲ್ಲಿರುವ ಭ್ರಷ್ಟ ಪೊಲೀಸ್ ಆಫೀಸರ್ ಕತೆ ಚಿತ್ರದಲ್ಲಿದೆ. ಪಿರಿಯಾಡಿಕಲ್ ಮೂವಿ ಇದಾಗಿದ್ದು ರಸ್ತೆಗಳಲ್ಲಿ ಬೀದಿ ದೀಪ ಇಲ್ಲದ, ಎಲೆಕ್ಟ್ರಿಕ್ ಲೈಟ್ ಇಲ್ಲದ ದಿನಗಳ ಕಥೆ ಹೆಣೆಯಲಾಗಿದೆ. ಈ ಸಿನಿಮಾಗಾಗಿ ಉತ್ತರ ಕರ್ನಾಟಕದ ಹಲವು ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ನಿರ್ಧರಿಸಲಾಗಿದೆ. ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿದ್ದು, ಅಚ್ಯುತರಾವ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.