ಲಖನೌ: ರಜಪೂತ ಸಮುದಾಯದ ತೀವ್ರ ವಿರೋಧಕ್ಕೆ ಕಾರಣವಾಗಿರುವ ಬಹು ನಿರೀಕ್ಷಿತ ಬಾಲಿವುಡ್ ಚಿತ್ರ ಪದ್ಮಾವತಿ ಬಿಡುಗಡೆಗೆ ಉತ್ತಕ ಪ್ರದೇಶ ಸರ್ಕಾರ ಕೂಡ ನಕಾರಾ ವ್ಯಕ್ತಪಡಿಸಿದ್ದು, ಚಿತ್ರ ಬಿಡುಗಡೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಅಪಾಯವಿದೆ ಎಂದು ಹೇಳಿದೆ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಿತ ಚಿತ್ರ "ಪದ್ಮಾವತಿ" ಬಿಡುಗಡೆಯಿಂದ ವ್ಯಾಪಕ ಅರಾಜಕತೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಗುಪ್ತಚರ ವರದಿ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಇದರ ಬಿಡುಗಡೆ ತಡೆ ಹಿಡಿಯುವಂತೆ ಸೂಚಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬುಧವಾರ ಪತ್ರ ಬರೆದಿದೆ. ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಡಿಸೆಂಬರ್ 1ರಂದು ಈ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಜನರ ಭಾವನೆಗಳನ್ನು ಸೆನ್ಸಾರ್ ಮಂಡಳಿಗೆ ತಿಳಿಸುವ ಮೂಲಕ ಅದರ ಬಿಡುಗಡೆ ತಡೆ ಹಿಡಿಯಬೇಕು ಎಂದು ಪತ್ರ ಬರೆಯಲಾಗಿದೆ.
ಎರಡು ಪುಟಗಳ ಪತ್ರದಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎನ್.ಕೆ.ಸಿನ್ಹಾ ಅವರಿಗೆ ಈ ಬಗ್ಗೆ ವಿವರಣೆ ನೀಡಿದ್ದು, "ಉತ್ತಮ ಚಿತ್ರಗಳು ಪ್ರೇಕ್ಷಕರಿಗೆ ಹಾಗೂ ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಆದರೆ ಕಾಲ್ಪನಿಕ ಇಲ್ಲವೇ ಐತಿಹಾಸಿಕ ಆಧಾರ ಇಲ್ಲದ, ವಿರೂಪಗೊಳಿಸಲಾದ ಇತಿಹಾಸದ ಅಂಶಗಳನ್ನು ಒಳಗೊಂಡ ಚಿತ್ರಗಳು ಕೇವಲ ದ್ವೇಷವನ್ನು ಹರಡುವುದು ಮಾತ್ರವಲ್ಲದೇ, ಕಾನೂನು ಹಾಗೂ ಸುವ್ಯವಸ್ಥೆಗೂ ಸವಾಲು ತಂದೊಡ್ಡುತ್ತದೆ" ಎಂದು ಹೇಳಿದ್ದಾರೆ.
ಅಂತೆಯೇ ಪತ್ರದಲ್ಲಿ, ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಗಳ ಎಣಿಕೆ ಇದೇ ಡಿಸೆಂಬರ್ 1ರಂದು ನಡೆಯಲಿದ್ದು, ಅದೇ ದಿನ ಪದ್ಮಾವತಿ ಚಿತ್ರ ಬಿಡುಗಡೆಯಾಗುತ್ತಿದೆ. ಇದರಿಂದ ರಾಜ್ಯ ಪೊಲೀಸರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ ಎಂದು ಹೇಳಿರುವ ಅಧಿಕಾರಿಗಳು, "ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಕೇಂದ್ರೀಯ ಪಡೆಗಳಿಗೆ ಮನವಿ ಮಾಡಿಕೊಳ್ಳಲಾಗಿದ್ದು, ಪದ್ಮಾವತಿ ಚಿತ್ರವೂ ಅದೇ ದಿನ ಬಿಡುಗಡೆಯಾದರೆ, ಬೆದರಿಕೆಯ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ನಾವು ಖಾತ್ರಿಪಡಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಒಟ್ಟಾರೆ ಇದೀಗ ಪದ್ಮಾವತಿ ಚಿತ್ರ ಬಿಡುಗಡೆ ವಿವಾದ ಕಗ್ಗಾಂಟಾಗಿ ಪರಿಣಮಿಸಿದ್ದು, ದಿನೇ ದಿನೇ ಚಿತ್ರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ.