ಬೆಂಗಳೂರು: ಸತತ ಮೂರು ಭರ್ಜರಿ ಹಿಟ್ ಸಿನಿಮಾ ನೀಡಿದ ನಟ ಧ್ರುವಸರ್ಜಾ ಬಾಲಿವುಡ್ ಚಿತ್ರಕಥೆ ಬರಹಗಾರರ ಗಮನ ಸೆಳೆದಿದ್ದಾರೆ. ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ಈಗಾಗಲೇ ಥಿಯೇಟರ್ ಗಳಲ್ಲಿ 50 ದಿನ ಪೂರೈಸಿದೆ.
ಬಾಲಿವುಡ್ ನ ರೇಸ್-2 ಸಿನಿಮಾಗೆ ಚಿತ್ರಕಥೆ ಬರೆದಿದ್ದ ಶಿರಾಜ್ ಅಹ್ಮದ್ ಧ್ರುವಸರ್ಜಾಗಾಗಿ ಕಥೆ ಬರೆಯುತ್ತಿದ್ದಾರೆ. ನಟ ಧ್ರುವ ಒಂದು ಸಾಲಿನಲ್ಲಿ ಕಥೆ ಕೇಳಿ ಮೆಚ್ಚಿದ ನಂತರ ಪೂರ್ಣ ಚಿತ್ರಕಥೆ ಬರೆಯುತ್ತಿದ್ದಾರೆ.
ದರ್ಶನ್ ಅಭಿನಯದ ಜಗ್ಗುದಾದಾ ಸಿನಿಮಾ ನಿರ್ದೇಶಿಸಿದ ರಾಘವೇಂದ್ರ ಹೆಗಡೆ ಕೂಡ ಧ್ರುವ ಸರ್ಜಾ ಜೊತೆ ಕೆಲಸ ಮಾಡಲು ಆಸಕ್ತಿ ತೋರಿದ್ದಾರೆ. ಮರ್ಡರ್, ಆಶಿಖಿ-2 ಸಿನಿಮಾಗಳಿಗೆ ಚಿತ್ರಕಥೆ ಬರೆದಿರುವ ಶಾಗುಫ್ತಾ ರಫೀಕ್ ಅವರಿಂದ ಧ್ರುವ ಸರ್ಜಾಗಾಗಿ ಚಿತ್ರಕಥೆ ಬರೆಸುತ್ತಿದ್ದಾರೆ.
ಉತ್ತಮ ಕಥೆಯೊಂದಿಗೆ ಬನ್ನಿ ಎಂದು ಧ್ರುವ ರಾಘವೇಂದ್ರಗೆ ಹೇಳಿದ್ದಾರೆ, ಅದು ಒಳ್ಳೆಯ ಲವ್ ಸ್ಟೋರಿ ಆಗಿರಬೇಕೆಂದು ಧ್ರುವ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಈಗಾಗಲೇ ಕಥೆ ಅಂತಿಮ ರೂಪ ತಲುಪಿದ್ದು, ಧ್ರುವ ಸರ್ಜಾ ಗೆ ಕಥೆ ಹೇಳಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೇ ರಾಘವೇಂದ್ರ ಕನ್ನಡದಲ್ಲಿ ಎರಡನೇ ಸಿನಿಮಾ ಮಾಡಲಿದ್ದಾರೆ.
ಸದ್ಯ ರಾಘವೇಂದ್ರ ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ಶನಿ ಧಾರಾವಾಹಿಯ ನಿರ್ದೇಶನದಲ್ಲಿ ನಿರತರಾಗಿದ್ದಾರೆ.
ಧ್ರುವ ಸರ್ಜಾ ಸಿಕ್ಕ ಸಿಕ್ಕ ಕಥೆಗಳನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲ, ಸಿನಿಮಾ ಆಯ್ಕೆ ವಿಷಯದಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಅತ್ಯುತ್ತಮ ಕಥೆಗಳನ್ನು ಮಾತ್ರ ಆಯ್ಕೆ ಮಾಡುವ ಧ್ರುವ ಸರ್ಜಾ ರಿಂದ ಬಾಲಿವುಡ್ ಬರಹಗಾರರು ಸ್ಫೂರ್ತಿ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನೂ ಭರ್ಜರಿ ಸಿನಿಮಾದ ಅರ್ಧಶತಕದ ಸಂಭ್ರಮದಲ್ಲಿರುವ ಧ್ರುವ ಪೊಗರು ಚಿತ್ರಕ್ಕೆ ಸಹಿ ಮಾಡಿದ್ದಾರೆ.