ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಭರತ್ ಅನೇ ನೇನು ಚಿತ್ರ ದೇಶಾದ್ಯಂತ ಭರ್ಜರಿ ಓಟ ಮುಂದುವರೆಸಿದೆ. ಚಿತ್ರದ ಯಶಸ್ಸಿನ ಕುರಿತು ಟ್ವೀಟ್ ಮಾಡಿದ್ದ ಮಹೇಶ್ ಬಾಬು ಅವರು ಕನ್ನಡದ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು.
ಮಹೇಶ್ ಬಾಬು ಅವರು ಟ್ವೀಟ್ ಮಾಡಿ ಭರತ್ ಅನೇ ನೇನು ಚಿತ್ರವನ್ನು ಗೆಲ್ಲಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದು ತೆಲುಗು, ತಮಿಳು, ಮಲಯಾಳಂ, ಇಂಗ್ಲೀಷ್ ನಲ್ಲಿ ಬರೆದುಕೊಂಡಿದ್ದರು. ಈ ಟ್ವೀಟ್ ಅನ್ನು ಕಂಡ ಕನ್ನಡದ ಅಭಿಮಾನಿಗಳು ಮಹೇಶ್ ಬಾಬು ಗೆ ರೀಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು.
ಡಿಯರ್ ಸರ್ ಕರ್ನಾಟಕದ ಸುಮಾರು 100 ಥಿಯೇಟರ್ ಗಳಲ್ಲಿ ನಿಮ್ಮ ಸಿನಿಮಾ ಬಿಡುಗಡೆಯಾಗಿದೆ. ಕನ್ನಡದ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕೂಡಾ ನಿಮ್ಮ ಚಿತ್ರ ಯಶಸ್ಸಿಗೆ ಕಾರಣಕರ್ತರು. ಇಲ್ಲೂ ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ನಿಮ್ಮ ಅಭಿಮಾನಿಗಳಿದ್ದಾರೆ. ಇಷ್ಟಾದರೂ ನೀವು ಪಕ್ಷಪಾತ ಮಾಡುತ್ತಿದ್ದೀರಿ. ನಮ್ಮನ್ನು ನೀವು ಪರಿಗಣಿಸುತ್ತಿಲ್ಲ. ನೀವು ಕನ್ನಡದಲ್ಲಿ ಕೂಡಾ ನಮಗೆ ಧನ್ಯವಾದ ಹೇಳಬೇಕಿತ್ತು. ಎಲ್ಲಾ ಭಾಷೆಗಳಿಗೂ ನೀವು ಸಮನಾಗಿ ಪ್ರಾಮುಖ್ಯತೆ ನೀಡಬೇಕು ಎಂದು ಟ್ವೀಟ್ ಮಾಡಿದ್ದರು.
ಕನ್ನಡದ ಅಭಿಮಾನಿಗಳ ಟ್ವೀಟ್ ಕಂಡ ಮಹೇಶ್ ಬಾಬು ನಂತರ ತಮ್ಮ ಟ್ವೀಟರ್ ಹಾಗೂ ಫೇಸ್ ಬುಕ್ ನಲ್ಲಿ ಕನ್ನಡದಲ್ಲಿ ಕೂಡಾ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.