ಸಿನಿಮಾ ಸುದ್ದಿ

ಎನ್ ಟಿಆರ್ ಕುಟುಂಬದ ಅತ್ಯಂತ ಧೈರ್ಯಶಾಲಿ ಮಗ: ಹರಿಕೃಷ್ಣ ಕುರಿತು ಎನ್ ಟಿಆರ್ 2ನೇ ಪತ್ನಿ ಹೇಳಿಕೆ

Srinivasamurthy VN
ಹೈದರಾಬಾದ್: ಅಪಘಾತದಲ್ಲಿ ಮೃತಪಟ್ಟ ನಟ ಹರಿಕೃಷ್ಣ ನಂದಮೂರಿ ಕುಟುಂಬದ ಅತ್ಯಂತ ಧೈರ್ಯಶಾಲಿ ಮಗನಾಗಿದ್ದ. ಎಂದೂ ಆತ ಯಾರಿಗೂ ನೋವುಂಟು ಮಾಡಿರಲಿಲ್ಲ. ಹೀಗಿದ್ದೂ ಅವರಿಗೆ ಇಂತಹ ಸಾವು ಸರಿಯಲ್ಲ ಎಂದು ಎನ್ ಟಿಆರ್ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಹರಿಕೃಷ್ಣ ಅವರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಲಕ್ಷ್ಮೀ ಪಾರ್ವತಿ ಅವರು, ನಿಜಕ್ಕೂ ಅವರ ಸಾವು ನನಗೆ ಅಪಾರ ಆಘಾತವನ್ನುಂಟು ಮಾಡಿದೆ. ಹರಿಕೃಷ್ಣ ಎನ್ ಟಿಆರ್ ಮಕ್ಕಳಲ್ಲೇ ನಾನು ಅತ್ಯಂತ ಪ್ರೀತಿಸುವ ಮಗವಾಗಿದ್ದ. ಅವರ ಸಾವಿನ ವಿಚಾರ ಕೇಳಿ ನಿಜಕ್ಕೂ ಅವರ ತಂದೆಯ ಆತ್ಮ ದುಃಖಿಸುತ್ತಿರಬಹುದು ಎಂದು ಹೇಳಿದ್ದಾರೆ.
ಹರಿಕೃಷ್ಣ ಎಂದಿಗೂ ಯಾರಿಗೂ ನೋವುಂಟು ಮಾಡಿದವರಲ್ಲ. ಆದರೂ ಇಂತಹ ಸಾವು ಏಕಾಯಿತು. ಅವರ ಸಾವು ನಿಜಕ್ಕೂ ತಡೆಯಲಾಗದ ನೋವು ತಂದಿದೆ. ಟಿಡಿಪಿ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಹರಿಕೃಷ್ಣ ಅವರ ಸಾವಿನಿಂದ ಅಪಾರ ಪ್ರಮಾಣದ ಎನ್ ಟಿಆರ್ ಅಭಿಮಾನಿಗಳಿಗೆ ದುಃಖವಾಗಿದೆ. ಅವರ ತಂದೆ ಟಿಡಿಪಿ ಪಕ್ಷ ಸ್ಥಾಪನೆ ಮಾಡಿದ್ದಾಗ ಇದೇ ಹರಿಕೃಷ್ಣ ಚೈತನ್ಯ ರಥಮ್ ಯಾತ್ರೆಯ ಸಾರಥಿಯಾಗಿದ್ದರು. ಪಕ್ಷದ ವಾಹನವನ್ನು ಖುದ್ಧು ತಾವೇ ಚಲಾಯಿಸಿಕೊಂಡು ಹೋಗಿದ್ದರು. ಅಲ್ಲದೆ ಅವರ ತಂದೆ ಮುಖ್ಯಮಂತ್ರಿಯಾಗುವಲ್ಲಿ ಹರಿಕೃಷ್ಣ ತುಂಬಾ ಶ್ರಮಿಸಿದ್ದರು. ಇಂತಹ ಹರಿಕೃಷ್ಣ ಅವರ ಸಾವು ಈ ರೀತಿ ಸಂಭವಿಸುತ್ತದೆ ಎಂದು ಯಾರೂ ತಿಳಿದಿರಲಿಲ್ಲ ಎಂದು ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ.
SCROLL FOR NEXT