ಕೊಪ್ಪಳ: 8 ತಿಂಗಳಿಂದ ಪಾಳು ಬಿದ್ದಿದ್ದ ಥಿಯೇಟರ್ ವೊಂದು ಯಶ್ ಅಭಿಮಾನಿಯ ಸಾಹಸದಿಂದಾಗಿ ಮತ್ತೆ ಕೆಜಿಎಫ್ ಚಿತ್ರಕ್ಕಾಗಿ ಪುನಾರಂಭವಾಗಿದೆ.
ಹೌದು.. ಜಗತ್ತಿನಾದ್ಯಂತ ನಿನ್ನೆ ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿರುವಂತೆಯೇ ಇತ್ತ ಕೊಪ್ಪಳದಲ್ಲಿ ಕಳೆದ 8 ತಿಂಗಳಿಂದ ಮುಚ್ಚಲ್ಪಟ್ಟಿದ್ದ ಥಿಯೇಟರ್ ವೊಂದು ಯಶ್ ಅಭಿಮಾನಿಯ ಸಾಹಸದಿಂದಾಗಿ ಕೆಜಿಎಫ್ ಗಾಗಿ ಮತ್ತೆ ಪುನಾರಂಭವಾಗಿದೆ.
ಆರ್ಥಿಕ ಮುಗ್ಗಟ್ಟಿನಿಂದಾಗಿ ಕಳೆದ 8 ತಿಂಗಳ ಹಿಂದೆ ಮುಚ್ಚಲ್ಪಟ್ಟಿದ್ದ ಕೊಪ್ಪಳದ ಗಡಿಯಾರ ಕಂಬದ ಹತ್ತಿರವಿರುವ ಶಾರದ ಟಾಕೀಸ್ ಇದೀಗ ಮತ್ತೆ ಕಾರ್ಯಾರಂಭ ಮಾಡಿದೆ. ಕೊಪ್ಪಳದ ಈ ಶಾರದಾ ಟಾಕೀಸ್ ಗೆ ಸುಮಾರು 47 ವರ್ಷಗಳ ಇತಿಹಾಸವಿದ್ದು, ಕಳೆದ 8 ತಿಂಗಳಿನಿಂದ ಈ ಟಾಕೀಸ್ ಆರ್ಥಿಕ ತೊಂದರೆಯಿಂದಾಗಿ ಸಿನಿಮಾಗಳ ಪ್ರದರ್ಶನ ಕಾಣದೆ ಪಾಳು ಬಿದ್ದಿತ್ತು.
ಆದರೆ ರಾಕಿಭಾಯ್ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಕಲುಬುರ್ಗಿ ಮೂಲದ ಯಶ್ ಅಭಿಮಾನಿಯೊಬ್ಬರು ಟಾಕೀಸ್ ಮಾಲೀಕರಿಂದ ಅದನ್ನು ಲೀಸ್ ಗೆ ಪಡೆದು ಟಾಕೀಸ್ ಅನ್ನು ಮತ್ತೆ ರೆಡಿ ಮಾಡಿಸಿದ್ದರು. ಅಲ್ಲದೇ ಕೆಜಿಎಫ್ ಚಿತ್ರ ಬಿಡುಗಡೆ ಮುನ್ನಾದಿನ ರಾತ್ರೋರಾತ್ರಿ ಕೊಪ್ಪಳದ ಯಶ್ ಅಭಿಮಾನಿಗಳು ಶಾರದ ಟಾಕೀಸ್ ಅನ್ನ ಮಧುವಣಗಿತ್ತಿಯಂತೆ ರೆಡಿ ಮಾಡಿ ಬೆಳಗ್ಗೆ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟಿದ್ದಾರೆ.
ಈಗಾಗಲೇ ಹಲವು ದಾಖಲೆಗಳನ್ನ ತನ್ನ ಮುಡಿಗೇರಿಸಿಕೊಂಡಿರುವ ಕೆಜಿಎಫ್ ಚಿತ್ರ ಹಾಳು ಬಿದ್ದಿದ್ದ ಟಾಕೀಸ್ವೊಂದನ್ನು ಮತ್ತೆ ಶುರು ಮಾಡೋ ಮೂಲಕ ಮತ್ತೊಂದು ದಾಖಲೆ ಬರೆದಿದೆ.