ಬೆಂಗಳೂರು: ಪ್ರಾಣಿ ಪ್ರೇಮಿಯಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಗೆ ಮುಂದಾಗಿದ್ದಾರೆ. ನಟ ದರ್ಶನ್ ಅವರನ್ನು ಕರ್ನಾಟಕ ಅರಣ್ಯ ಇಲಾಖೆ ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆ ಮಾಡುವ ಜಾಗೃತಿ ರಾಯಭಾರಿಯಾಗಿಸಿ ನೇಮಿಸಿದ್ದಾರೆ.
ಇದೇ ವಿಷಯವನ್ನಾಧರಿಸಿ ವಿಡಿಯೋ ಬಿಡುಗಡೆ ಮಾಡಿರುವ ದರ್ಶನ್ ' ಬನ್ನಿ ಒಟ್ಟಾಗಿ ಸೇರಿ ಪರಿಸರ ಸಂರಕ್ಷಣೆ ಮಾಡೋಣ, ನಾನೊಬ್ಬ ಪ್ರಾಣಿ ಪ್ರೇಮಿ, ನನ್ನ ಫಾರ್ಮ್ ಹೌಸ್ ನಲ್ಲಿ ಕಳೆದ 13 ವರ್ಷಗಳಿಂದ ಹಲವು ಪ್ರಾಣಿಗಳನ್ನು ಸಾಕುತ್ತಾ ಬಂದಿದ್ದೇನೆ, ನನ್ನ ಫಾರ್ಮ್ ಹಾಸ್ ಅನ್ನು ಗ್ರೀನ್ ಬೆಲ್ಟ್ ಮಾಡಿದ್ದೇನೆ, ನಾನು 1,800 ವಿಧದ ಸಸಿಗಳನ್ನು ಖರೀದಿಸಿದ್ದೇನೆ, ನನ್ನ ತಂಡದ ಜೊತೆ ಅವುಗಳನ್ನು ನೆಟ್ಟಿದ್ದೇನೆ, ಪರಿಸರ ಸಂರಕ್ಷಿಸುವಲ್ಲಿ ಇದು ನನ್ನ ಕೊಡುಗೆಯಾಗಿದೆ, ಅರಣ್ಯ ಇಲಾಖೆ ಜೊತೆ ಕೈ ಜೋಡಿಸುವ ಮೊದಲೇ ನಾನು ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿದ್ದೇನೆ, ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡಿ ಉಡುಗೊರೆ ನೀಡಬೇಕು ಎಂದು ದರ್ಶನ್ ಹೇಳಿದ್ದಾರೆ.
ನಮ್ಮ ಮುಂದಿನ ಪೀಳಿಗೆ ಪರಿಸರವನ್ನು ಕೇವಲ ಪುಸ್ತಕ ಹಾಗೂ ಫೋಟೋಗಳಲ್ಲಿ ನೋಡುವಂತಾಗಬಾರದು, ಪುಸ್ತಕಗಳಲ್ಲಿ ಪ್ರಿಂಟ್ ಆಗಿರುವ ಆನೆ, ಹುಲಿ, ಮತ್ತು ಮರಗಳನ್ನು ನಮ್ಮ ಮಕ್ಕಳು ನೋಡುವ ಸ್ಥಿತಿ ಬರುವುದಿಲ್ಲ ಎಂದು ನಾನು ಬಾವಿಸುತ್ತೇನೆ ಎಂದು ದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ. ಸತ್ಯ ಹೇಳಬೇಕೆಂದರೇ ಈಗಾಗಲೇ ನಾವು ಆ ಹಂತವನ್ನು ತಲುಪಿದ್ದೇವೆ, ದಿನದಿಂದ ದಿನಕ್ಕೆ ಸಸ್ಯ ಮತ್ತು ಪ್ರಾಣಿ ಸಂಕುಲ ನಶಿಸುತ್ತಿದೆ,. ಕೆಲವು ಜಾತಿಯ ಪ್ರಾಣಿಗಳ ಬಗ್ಗೆ ಕೇವಲ ಪುಸ್ತಕಗಳಲ್ಲಿ ಓದಿ ತಿಳಿದುಕೊಳ್ಳುತ್ತಿದ್ದೇವೆ, ಇದಕ್ಕೆ ಕಾರಣ ಪರಿಸರ ವಿನಾಶ ಎಂದು ಹೇಳಿದ್ದಾರೆ.
ಕೇವಲ ವಿಶ್ವ ಪರಿಸರ ದಿನಾಚರಣೆಗಾಗಿ ಮಾತ್ರ ಪರಿಸರ ಸಂರಕ್ಷಣೆ ಮುಂದಾಗುವುದರ ಬದಲು, ಸಸಿಗಳನ್ನು ನೆಡುವುದನ್ನು ಕಡ್ಡಾಯ ಮಾಡಿಕೊಳ್ಳಿ. ಈಗ ಸದ್ಯ ಮುಂಗಾರು ಆರಂಭವಾಗಿದೆ, ನಿಮಗೆ ಬೇಕಾದ ಯಾವುದಾದರೂ ಎರಡು ಮೂರು ಜಾತಿಯ ಸಸಿಗಳನ್ನು ತಂದು ನೆಡಿ, ಆಗ ನೀವು ತುಂಬಾ ಸಂತೋಷವಾಗಿರುತ್ತೀರಿ, ಎಂದು ಹೇಳಿರುವ ದರ್ಶನ್ ಬನ್ನಿ ಪರಿಸರದ ಜೊತೆ ಪ್ರೀತಿ ಬೆಳೆಸಿ ಎಂಬ ಸಂದೇಶ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos