ಕಲಿಯುಗದ ಕರ್ಣ, ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರು ಚಿರನಿದ್ರೆಗೆ ಜಾರಿದ್ದು ಇಂದು ಕಂಠೀರವ ಸ್ಟುಡಿಯೋದಲ್ಲಿ ನಟಸಾರ್ವಭೌಮ, ದಿವಂಗತ ಡಾ| ರಾಜಕುಮಾರ್ ಅವರ ಸಮಾಧಿ ಸಮೀಪದಲ್ಲೇ ಅಂಬರೀಶ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ.
ರಾಜಕುಮಾರ್ ಹಾಗೂ ಅಂಬರೀಶ್ ಅವರು ಒಡಹುಟ್ಟಿದ್ದವರು ಚಿತ್ರದಲ್ಲಿ ಅಭಿನಯಿಸಿದ್ದು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅಂತೆ ಅವರಿಬ್ಬರ ಸಮಾಧಿಯನ್ನು ಒಂದೇ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಅದಾಗಲೇ ಡಾ| ರಾಜ್ ಸ್ಮಾರಕ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದೆ. ಈಗ ಇದರ ಪಕ್ಕದಲ್ಲೇ ಅಂಬರೀಶ್ ಅವರ ಸ್ಮಾರಕವನ್ನು ನಿರ್ಮಿಸಲಾಗುತ್ತದೆ.
ಇನ್ನು ಕನ್ನಡದ ಚಿತ್ರರಂಗದ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಮೂರು ನಟರನ್ನು ಬಿಂಬಿಸಲಾಗುತ್ತಿದೆ. ರಾಜಕುಮಾರರನ್ನು ಬ್ರಹ್ಮ, ವಿಷ್ಣುವಾಗಿ ವಿಷ್ಣುವರ್ಧನ ಹಾಗೂ ಮಹೇಶ್ವರನಾಗಿ ಅಂಬರೀಶ್ ಅವರನ್ನು ನೋಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂವರು ದಿಗ್ಗಜ ನಟರ ಸ್ಮಾರಕ ಒಂದೇ ಕಡೆ ಇರಲಿ ಎಂಬ ಉದ್ದೇಶವನ್ನು ಹೊಂದಿರುವ ರಾಜ್ಯ ಸರ್ಕಾರ ಅಂಬರೀಶ್ ಅವರ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲು ತೀರ್ಮಾನಿಸಿದೆ.
ಇನ್ನು ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ವಿವಾದಗಳು ಸೃಷ್ಟಿಯಾಗಿದ್ದು ಮೈಸೂರಿನಲ್ಲೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದು ಇದರಿಂದಾಗಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಇದೀಗ ರಾಜಕುಮಾರ್, ಅಂಬರೀಶ್ ಸ್ಮಾರಕದ ಪಕ್ಕದಲ್ಲೇ ವಿಷ್ಣುವರ್ಧನ್ ಸ್ಮಾರಕವನ್ನೂ ನಿರ್ಮಿಸುವ ಚಿಂತನೆ ಸರ್ಕಾರದಲ್ಲಿದೆ.