ಬೆಂಗಳೂರು: ಇಡೀ ಭಾರತೀಯ ಚಿತ್ರರಂಗವೇ ನಿಬ್ಬೆರಗಾಗುವಂತೆ ಮಾಡಿರುವ ನಟ ಅರ್ಜುನ್ ಸರ್ಜಾ ವಿರುದ್ಧದ ಸ್ಯಾಂಡಲ್ ವುಡ್ ಮೀಟೂ ಪ್ರಕರಣಕ್ಕೆ 'ಆಂಜನೇಯ' ಕಾರಣನಂತೆ..
ಹೌದು.. ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ ಮೀಟೂ ಆರೋಪ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಭಾರಿ ವಿವಾದಕ್ಕೆ ಕಾರಣವಾಗಿರುವ ಈ ಪ್ರಕರಣಕ್ಕೆ ನಟ ಅರ್ಜುನ್ ಸರ್ಜಾ ನಿರ್ಮಿಸುತ್ತಿರುವ ಆಂಜನೇಯ ಸ್ವಾಮಿ ದೇಗುಲವೇ ಕಾರಣ ಎನ್ನಲಾಗುತ್ತಿದೆ.
ಈ ಬಗ್ಗೆ ಅರ್ಜುನ್ ಸರ್ಜಾ ಆಪ್ತ ಮತ್ತು ಉದ್ಯಮಿ ಪ್ರಶಾಂತ್ ಸಂಬರಗಿ ಮಾಹಿತಿ ನೀಡಿದ್ದು, ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಸಂಬರಗಿ ಅರ್ಜುನ್ ವಿರುದ್ಧದ ಆರೋಪದ ಹಿಂದೆ ಹಿಂದೂ ವಿರೋಧಿ ಸಂಘಟನೆಗಳಿವೆ ಎಂದು ಪ್ರಶಾಂತ್ ಗಂಭೀರ ಆರೋಪ ಮಾಡಿದ್ದಾರೆ.
ಇಷ್ಟಕ್ಕೂ ಪ್ರಶಾಂತ್ ಹೇಳಿದ್ದೇನು..?
ತಮಿಳುನಾಡಿನಲ್ಲಿ ಅರ್ಜುನ್ ಸರ್ಜಾ ಅವರು ನಿರ್ಮಿಸುತ್ತಿರುವ ಅತಿ ಎತ್ತರದ ಆಂಜನೇಯ ಸ್ವಾಮಿ ದೇವಾಲಯವೇ ಇಡೀ ಪ್ರಕರಣಕ್ಕೆ ಮೂಲ ಕಾರಣವಾಗಿದ್ದು, ಅರ್ಜುನ್ ಸರ್ಜಾ ಅವರ ಹಿಂದೂಪರ ಕಾಳಜಿ ಹಾಗೂ ಅವರು ಕಟ್ಟಿಸುತ್ತಿರುವ ಗೋಶಾಲೆಗಳು ಹಾಗೂ ಆಂಜನೇಯಸ್ವಾಮಿ ದೇವಾಲಯ ಹಾಗೂ ಅವರು ಮೋದಿ ಪರವಾಗಿ ಮಾತನಾಡುತ್ತಿರುವುದರಿಂದ, ಅಮೆರಿಕಾದಿಂದ ಶೃತಿ ಹರಿಹರನ್ ಗೆ ಹಣ ಸಂದಾಯವಾಗಿದೆ.. ಹೀಗಾಗಿ ದುಡ್ಡು ಪಡೆದು ಶೃತಿ ಈ ಕೆಲಸ ಮಾಡಿದ್ದಾರೆ ಎಂದು ಪ್ರಶಾಂತ್ ಶೃತಿ ವಿರುದ್ಧ ದಾಖಲಾಗಿರುವ ಎಫ್ ಐಆರ್ ಅನ್ನು ತೋರಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ಕನ್ನಡದ ಇಬ್ಬರು ನಟರ ಕೈವಾಡವಿದ್ದು, ಒಬ್ಬನಟನ ಬ್ಯಾಂಕ್ ಖಾತೆಯಿಂದ ಶೃತಿ ಅವರಿಗೆ ಹಣ ಸಂದಾಯವಾಗಿರುಯವ ದಾಖಲೆಯನ್ನೂ ಕೂಡ ಅರ್ಜುನ್ ಸರ್ಜಾ ಅವರ ಕಡೆಯವರು ತೋರಿಸುತ್ತಿದ್ದಾರೆ. ಸದ್ಯ ಯಾವ ಯಾವ ನಟರು ಎಂದು ಬಹಿರಂಗ ಪಡಿಸಲು ಪ್ರಶಾಂತ್ ನಿರಾಕರಿಸಿದ್ದಾರೆ.
ಅರ್ಜುನ್ ಸರ್ಜಾ ಅವರ ಬಗ್ಗೆ ಕೆಟ್ಟ ಭಾವನೆ ಮೂಡಿಸಲೆಂದೇ ಈ ರೀತಿಯಾದ ಕೆಲಸ ಮಾಡಲಾಗುತ್ತಿದ್ದು, ಅಷ್ಟೇ ಅಲ್ಲದೇ ಶೃತಿ ಹರಿಹರನ್ ಅವರ ಫೇಸ್ಬುಕ್ ಅಕೌಂಟ್ ಹೊರದೇಶಗಳಿಂದ ಆಪರೇಟ್ ಆಗುತ್ತಿದೆ. ಹಿಂದೂ ಭಾವನೆಗಳನ್ನು ಧಕ್ಕೆ ಮಾಡುವುದು, ಅರ್ಜುನ್ ಸರ್ಜಾ ಅವರ ಫ್ಯಾಮಿಲಿಗೆ ಶಾಂತಿ ಭಂಗ ಮಾಡುವುದು.. ಅರ್ಜುನ್ ಸರ್ಜಾ ಅವರ ಮೇಲೆ ಕೆಟ್ಟ ಹೆಸರು ತರುವುದೇ ಇದೆಲ್ಲದರ ಉದ್ದೇಶ ಎಂದು ಪ್ರಶಾಂತ್ ಗಂಭೀರ ಆರೋಪ ಮಾಡಿದ್ದಾರೆ.