ಸಿನಿಮಾ ಸುದ್ದಿ

ನೆರೆ ಸಂತ್ರಸ್ತರನ್ನು ನೋಡಿದರೆ ಕರುಳು ಚುರುಕ್ ಅನ್ನುತ್ತೇ, ಕುರುಕ್ಷೇತ್ರ ಚಿತ್ರದ ಸಂಭಾವನೆ ನೀಡುವೆ: ನಿಖಿಲ್

Lingaraj Badiger

ಹುಬ್ಬಳ್ಳಿ/ಧಾರವಾಡ/ಬೆಳಗಾವಿ: ನೆರೆ ಸಂತ್ರಸ್ತರನ್ನು ಮಾನವೀಯ ದೃಷ್ಟಿಯಿಂದ ನೋಡಿದರೆ  ಹೊಟ್ಟೆಯಲ್ಲಿ ಬೆಂಕಿ ಬೀಳುತ್ತದೆ, ಉತ್ತರ ಕರ್ನಾಟಕದ ನರೆ ಸಂತ್ರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ನೆರೆಯಿಂದ ಆಗಿರುವ ಹಾನಿಯನ್ನು ಊಹೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಯುವ ನಟ ಹಾಗೂ ಜೆಡಿಎಸ್ ಯುವ ಘಟಕ ರಾಜಾಧ್ಯಕ್ಷ  ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. 
ಧಾರವಾಡದಲ್ಲಿ ಅಂಧ ಮಕ್ಕಳೊಂದಿಗೆ ಬೆರೆತ ನಿಖಿಲ್ ಕುಮಾರಸ್ವಾಮಿ ಮಕ್ಕಳೊಂದಿಗೆ  ನೆಲದ ಮೇಲೆ ಕುಳಿತು ಮಕ್ಕಳ ಕಷ್ಟ ಆಲಿಸಿದರು. ಬಳಿಕ ಅಂಧ ಮಕ್ಕಳಿಗೆ ಅಗತ್ಯ ಸಲಕರಣೆಗಳನ್ನು ವಿತರಣೆ ಮಾಡಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನರು  ಸಂಕಷ್ಟಕ್ಕೆ ಸಿಲುಕಿದ್ದಾರೆ ಹೀಗಾಗಿ ಅಂತಹ ಜನರಿಗೆ ನಮ್ಮ ಪಕ್ಷದಿಂದ ತಕ್ಕ ಮಟ್ಟಿಗೆ ಸಹಾಯ  ಮಾಡುತ್ತಿದ್ದೇವೆ.  ಕೇಂದ್ರ, ರಾಜ್ಯ ಸರ್ಕಾರವಷ್ಟೇ ಅಲ್ಲ ರಾಜ್ಯದ ಜನತೆ ಕೂಡ ನೆರೆ ಸಂತ್ರಸ್ತರ ಪರ ನಿಲ್ಲಬೇಕು ಎಂದು ಕೈ ಮುಗಿದು ಮನವಿ ಮಾಡಿದರು. 

ರಾಜ್ಯದಲ್ಲಿ ಮಂತ್ರಿಮಂಡಲದ ರಚನೆ ಆಗಿಲ್ಲ, ಮುಖ್ಯಮಂತ್ರಿಗಳು ಒಬ್ಬರೇ  ಓಡಾಡುತ್ತಿದ್ದಾರೆ.  ದಯವಿಟ್ಟು ಅದೇನೆ ಆಗಲಿ ರಾಜಕೀಯವನ್ನು ಬದಿಗಿಟ್ಟು ನೆರೆ ಸಂತ್ರಸ್ಥರಿಗೆ ನೆರವಾಗಬೇಕಿದೆ ಎಂದರು.
ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ತಾವು ಕುರುಕ್ಷೇತ್ರ ಸಿನೆಮಾದಲ್ಲಿ ಪಡೆದ  ಸಂಭಾವನೆಯನ್ನು ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ನೀಡುವುದಾಗಿ ಪ್ರಕಟಿಸಿದರು. 
ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜನ  ತತ್ತರಿಸಿದ್ದಾರೆ. ಈ ಸಮಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನಾನು ಹುಬ್ಬಳ್ಳಿ,  ಧಾರವಾಡ, ಬೆಳಗಾವಿ, ಚಿಕ್ಕೋಡಿ, ಯಾದಗಿರಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ  ನೀಡುತ್ತೇನೆ. ಮಳೆಯ ಆರ್ಭಟಕ್ಕೆ  ಜನ ಬೀದಿಗೆ ಬಿದ್ದಿದ್ದಾರೆ ಎಂದು ಅವರು ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ತತ್ತರಿಸಿರುವ ನಿರಾಶ್ರಿತರಿಗೆ ಇಡೀ ಕರ್ನಾಟಕದ ಜನರ ಹೃದಯ ಮಿಡಿದಿದೆ. ಅವರಿಗೆ ಅಗತ್ಯ  ವಸ್ತುಗಳ ಪೂರೈಸುತ್ತಿದ್ದೇವೆ. ಪಕ್ಷದಿಂದಲೂ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ನೀಡುತ್ತೇವೆ ಎಂದರು.

ಅಂತೆಯೇ ಉತ್ತರ ಕರ್ನಾಟಕದ ಪ್ರವಾಹದ ವಾಸ್ತವ ಚಿತ್ರಣವನ್ನು ಮಾಧ್ಯಮಗಳು ಜನತೆಯ ಮುಂದಿಟ್ಟಿವೆ. ಈ ಭಾಗದಲ್ಲಿ ಮತ್ತೊಮ್ಮೆ ನಿರಾಶ್ರಿತರ ಬದುಕು ಕಟ್ಟುವ ಕೆಲಸ ಆಗಬೇಕಿದೆ. ನೆರೆಯಿಂದಾದ ಆಸ್ತಿ, ಬೆಳೆ, ಮನೆಗಳಿಗೆ ಆದ ಹಾನಿಗೆ ಸೂಕ್ತ ಪರಿಹಾರ ಕೊಡಿಸಲು ಕುಮಾರಣ್ಣನ  ನೇತೃತ್ವದಲ್ಲಿ ಜೆಡಿಎಸ್​ ಪಕ್ಷ ಶ್ರಮಿಸಲಿದೆ ಎಂದು ಅವರು ಭರವಸೆ ನೀಡಿದರು.

SCROLL FOR NEXT