ಕೋಲಾರ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರೀಕರಣಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ಕೆಜಿಎಫ್ -1 ಮುಂದುವರೆದ ಭಾಗದ ಚಿತ್ರೀಕರಣಕ್ಕೆ ಜಿಲ್ಲೆಯ ಕೆಜಿಎಫ್ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿದೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣಕ್ಕಾಗಿ ಕೆನಡಿಯಸ್ ಸೈನೈಡ್ ಗುಡ್ಡದ ಮೇಲೆ ದುಬಾರಿ ಸೆಟ್ ಹಾಕಲಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಆದರೆ, ಸೆಟ್ ಹಾಕುವ ವೇಳೆ ಗಿಡ ಮರಗಳನ್ನು ಹಾನಿ ಮಾಡಲಾಗಿದ್ದು, ಸ್ಥಳೀಯರಿಗೆ ತೊಂದರೆ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿದೆ.
ಚಿತ್ರೀಕರಣದಿಂದ ಪರಿಸರದ ಮೇಲೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಶ್ರೀನಿವಾಸ್ ಎಂಬುವರ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಕೆಜಿಎಫ್-2 ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿದೆ.
ಈ ಮಧ್ಯೆ ನ್ಯಾಯಾಲಯದ ತಡೆಯಾಜ್ಞೆ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು, ಆದೇಶ ನೋಡಿ ನ್ಯಾಯಾಲಯಕ್ಕೆ ಸೂಕ್ತ ಉತ್ತರ ನೀಡಲಾಗುವುದು. ಈಗಾಗಲೇ ಶೇಕಡಾ 60 ರಷ್ಟು ಚಿತ್ರೀಕರಣ ಮುಗಿದಿದ್ದು, ಈ ಹಿಂದೆ ಈ ರೀತಿಯ ತೊಂದರೆ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.
ಕೆಜಿಎಫ್ -2ರಲ್ಲಿ ಅಧೀರನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಮತ್ತಿತರ ನಟರು ಅಭಿನಯಿಸುತ್ತಿದ್ದು, ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗ ನ್ಯಾಯಾಲಯ ನೀಡಿರುವ ಆದೇಶದಿಂದ ಚಿತ್ರೀಕರಣ ವಿಳಂಬವಾಗುತ್ತದೆಯಾ? ಎಂಬ ಪ್ರಶ್ನೆ ಮೂಡಿದೆ.