ಸಿನಿಮಾ ಸುದ್ದಿ

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ನಟ ಯಶ್ ಅಭಿಮಾನಿ ಸಾವು

Sumana Upadhyaya

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲವೆಂದು ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.

ನಿನ್ನೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವಾಗಿತ್ತು. ಅವರನ್ನು ಭೇಟಿ ಮಾಡಲೆಂದು ಅವರ ಅಭಿಮಾನಿ ರವಿ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆ ಮುಂದೆ ಬಂದಿದ್ದ. ಆದರೆ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತು ನಿನ್ನೆ ಮಧ್ಯಾಹ್ನ ಯಶ್ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದು ಬೆಂಕಿ ಉರಿಯುತ್ತಿರುವಾಗಲೇ ರಸ್ತೆ ದಾಟಿದ್ದನು.

ಬೆಂಕಿಯಿಂದ ತೀವ್ರ ಸುಟ್ಟುಹೋಗಿದ್ದ ಆತನನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಿ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಬೆಂದು ಹೋಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ರವಿ ಇಂದು ನಸುಕಿನ ಜಾವ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ನ ಮೇರು ನಟ ಅಂಬರೀಶ್ ಕಳೆದ ಡಿಸೆಂಬರ್ ನಲ್ಲಿ ಮೃತಪಟ್ಟ ಕಾರಣ ಯಶ್ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು.

SCROLL FOR NEXT