ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ವಾಸವಿದ್ದ ಬಾಡಿಗೆ ಮನೆ ಖಾಲಿ ಮಾಡುವ ವೇಳೆ ಮನೆಯಲ್ಲಿದ್ದ ಹಲವು ವಸ್ತುಗಳನ್ನು ಡ್ಯಾಮೇಜ್ ಮಾಡಲಾಗಿದೆ ಎಂದು ಆರೋಪಿಸಿ ಮಾಲೀಕರಾದ ಡಾ. ಮುನಿಪ್ರಸಾದ್ ಅವರು ಯಶ್ ಕುಟುಂಬದ ವಿರುದ್ಧ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಮಾರು 20 ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಯಶ್ ತಾಯಿ ಪುಷ್ಪಾ ಹಾಗೂ ಕುಟುಂಬದ ಇತರರ ವಿರುದ್ಧ ಮನೆ ಮಾಲೀಕರಾದ ಡಾ. ಮುನಿ ಪ್ರಸಾದ್ ದೂರು ದಾಖಲಿಸಿದ್ದಾರೆ ಎಂದು ಬೆಂಗಳೂರು ಕೇಂದ್ರ ವಲಯ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಜೂನ್ 7 ರಂದು ಯಶ್ ಎರಡು ತಿಂಗಳ ಬಾಡಿಗೆ 80 ಸಾವಿರ ರೂಪಾಯಿಗಳ ಡಿಡಿ ಹಸ್ತಾಂತರ ಮಾಡಿ ಮನೆಯ ಕೀಯನ್ನು ಮನೆ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ಖಾಲಿ ಮಾಡುವ ವೇಳೆಯಲ್ಲಿ ವಾರ್ಡ್ ರೋಬ್ ಬಾಗಿಲು ಕಿಚನ್ ನಲ್ಲಿನ ಎಲ್ಲ ವಸ್ತುಗಳು, ಫಾರಿನ್ ಕಮೋಡ್ ಕೂಡ ಹೊಡೆದು ಹಾಕಿದ್ದಾರೆ ಎಂದು ಮನೆ ಮಾಲೀಕರು ಯಶ್ ವಿರುದ್ಧ ಆರೋಪಿಸಿದ್ದಾರೆ.ಇದರಿಂದಾಗಿ ಯಶ್ ಕುಟುಂಬ ಮತ್ತೆ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಂದರ್ಭ ಎದುರಾಗಿದೆ.
ಡಾ. ಮುನಿಪ್ರಸಾದ್ ಮತ್ತು ಡಾ. ವನಜಾ ದಂಪತಿಗಳು ಬನಶಂಕರಿಯ ತಮ್ಮ ಮನೆಯನ್ನು ಯಶ್ ಕುಟುಂಬಕ್ಕೆ 2010ರಲ್ಲಿ ಬಾಡಿಗೆಗೆ ನೀಡಿದ್ದರು.ಡಿಸೆಂಬರ್ 31, 2018ಕ್ಕೆ ಬಾಕಿ ಉಳಿದಿರುವ ಬಾಡಿಗೆಯನ್ನು ಪಾವತಿಸಬೇಕು ಎಂದು ಹೈಕೋರ್ಟ್ ಗಡುವು ನೀಡಿದ್ದರಿಂದ ಬಾಕಿ ಮೊತ್ತ 23 ಲಕ್ಷ ರೂಪಾಯಿ ಡಿಡಿ ನೀಡಲಾಗಿತ್ತು.
ಮಾರ್ಚ್ 31ಕ್ಕೆ ಯಶ್ ಬಾಡಿಗೆ ಮನೆ ಖಾಲಿ ಮಾಡುವಂತೆ ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು, ಆದರೆ, ಯಶ್ ಅವರ ತಾಯಿ ಪುಷ್ಪಾ ಆರು ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮನೆ ಮಾಲೀಕರ ಪರ ವಕೀಲರು ಎರಡು ತಿಂಗಳು ಕಾಲಾವಕಾಶ ನೀಡಲು ಒಪ್ಪಿದ್ದರು. ಹಾಗೂ ಮೇ 31ರ ತನಕ ಹೈಕೋರ್ಟ್ ಕಾಲಾವಕಾಶ ನೀಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos