ಬೆಂಗಳೂರು: ಬಾಡಿಗೆ ಮನೆಯನ್ನು ವಾಸಕ್ಕೆ ಯೋಗ್ಯವಲ್ಲದ ರೀತಿ ನಾಶಪಡಿಸಿ ಮಾಲೀಕರಿಗೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ನಟ ಯಶ್ ತಾಯಿ ಹಾಗೂ ಇತರರ ವಿರುದ್ಧ ಗಿರಿನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಹೈಕೋರ್ಟ್ ಆದೇಶದಂತೆ ಮನೆ ಖಾಲಿ ಮಾಡಿಕೊಂಡು ಹೋಗುವ ವೇಳೆ ಒಳಾಂಗಣ ವಸ್ತುಗಳನ್ನು ಎತ್ತಿಕೊಂಡು ಹೋಗುವ ಜತೆಗೆ ಕೆಲವು ವಸ್ತುಗಳನ್ನು ಹಾನಿಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರಾದ ಡಾ.ವನಜಾ ಅವರು ನೀಡಿದ ದೂರಿನ ಮೇಲೆ ಐಪಿಸಿ ಕಲಂ 427 ಅಡಿ ಕೇಸ್ ದಾಖಲಾಗಿದೆ.
''2010ರ ಅ.11ರಂದು ಬನಶಂಕರಿ 3ನೇ ಹಂತದಲ್ಲಿರುವ ಮನೆಯನ್ನು ಪುಷ್ಪಾ ಅವರಿಗೆ ಬಾಡಿಗೆಗೆ ನೀಡಿದ್ದೆವು. ಅವರು ಸರಿಯಾಗಿ ಬಾಡಿಗೆ ನೀಡದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. ಏಳು ವರ್ಷಗಳ ಕಾಲ ಅಧೀನ ನ್ಯಾಯಾಲಯ ಮತ್ತು ಹೈಕೋರ್ಟ್ನಲ್ಲಿ ವಿಚಾರಣೆ ನಡೆದು, ಮನೆ ಖಾಲಿ ಮಾಡುವಂತೆ ಆದೇಶ ನೀಡಲಾಗಿತ್ತು.
ಕೋರ್ಟ್ ಆದೇಶದಂತೆ ಅವರು ಮನೆ ಖಾಲಿ ಮಾಡಿ ಜೂ.6ರಂದು ಸಂಜೆ 6.30ಕ್ಕೆ ಅವರ ವಕೀಲರ ಮೂಲಕ ಮನೆಯ ಕೀಲಿಯನ್ನು ಹಸ್ತಾಂತರಿಸಿದ್ದರು. ನಂತರ ಮನೆಯ ಬೀಗ ತೆಗೆದು ನೋಡಿದಾಗ ಮನೆಯಲ್ಲಿದ್ದ ಎಲ್ಲ ಎಲೆಕ್ಟ್ರಿಕಲ್ ಬಲ್ಬ್, ಡೆಕೊರೇಷನ್ ಲ್ಯಾಂಪ್, ಫ್ಯಾನ್ಗಳು, ಒಳಗಿನ ಬಾಗಿಲುಗಳು, ಪೂಜಾ ಕೊಠಡಿಯ ಬಾಗಿಲು, ಬಾತ್ರೂಮ್ ಬಾಗಿಲುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿದ್ದಾರೆ.
ಅಲ್ಲದೇ, ವಾಷ್ಬೇಸಿನ್ ಮತ್ತು ಕಮೋಡ್ಗಳನ್ನು ಉದ್ದೇಶಪೂರ್ವಕವಾಗಿ ಒಡೆದು ನಾಶಪಡಿಸಿದ್ದಾರೆ. ಇವುಗಳ ಅಂದಾಜು ಬೆಲೆ 28 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ ಡಾ.ವನಜಾ ಆರೋಪಿಸಿದ್ದಾರೆ.