ಸಿನಿಮಾ ಸುದ್ದಿ

ಕನ್ನಡದಲ್ಲಿ ಅಭಿನಯಿಸಲು 'ಕಣ್ಸನ್ನೆ ಹುಡುಗಿ' ಪ್ರಿಯಾ ವಾರಿಯರ್ ರೆಡಿ?

Raghavendra Adiga
ಬೆಂಗಳೂರು: "ಕಣ್ಸನ್ನೆ ಹುಡುಗಿ" ಎಂದು ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಮೂಲಕ ಪ್ರಸಿದ್ದರಾದ ಮಲಯಾಲಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಪ್ರಯತ್ನಿಸಿದರೂ ಇದುವರೆಗೆ ಯಶಸ್ವಿಯಾಗಿಲ್ಲ. "ಒರು ಆಡಾರ್ ಲವ್" ಖ್ಯಾತಿಯ ಪ್ರಿಯಾ ಕನ್ನಡ ಚಿತ್ರರಂಗಕ್ಕೆ ಅಧಿಕೃತ ಪ್ರವೇಶವನ್ನಿನ್ನೂ ಪಡೆದಿಲ್ಲ. ಆದರೆ ಈಗ ಹಿರಿಯ ನಿರ್ದೇಶಕರಾದ ಉಪೇಂದ್ರ, ಪ್ರೇಮ್ ಮೊದಲಾದವರೊಡನೆ ಕೆಲಸ ಮಾಡಿದ್ದ ರಘು ಕೋವಿ ತಾವು ಸ್ವತಂತ್ರ ನಿರ್ದೇಶನದಲ್ಲಿ ಚಿತ್ರ ತಯಾರಿಗೆ ಕೈಹಾಕಿದ್ದಾರೆ. ಈ ಚಿತ್ರಕ್ಕೆ "ಕಿಲ್ಲಿಂಗ್ ವೀರಪ್ಪನ್" ಚಿತ್ರದ ನಿರ್ಮಾಪಕರಾಗಿದ್ದ ಬಿ.ಎಸ್. ಸುಧೀಂದ್ರ ಮತ್ತು ಇ. ಶಿವಪ್ರಕಾಶ್ ಬಂಡವಾಳ ಹೂಡಲಿದ್ದಾರೆ.ಈಗ ನಿರ್ಮಾಪಕರು ಹಾಗೂ ಚಿತ್ರತಂಡ ತಮ್ಮ ನೂತನ ಚಿತ್ರಕ್ಕೆ ನಾಯಕಿಯಾಗುವಂತೆ ಪ್ರಿಯಾ ವಾರಿಯರ್ ಗೆ ಆಹ್ವಾನ ನೀಡಿದೆ.
ಪ್ರೇಮಕಥಾನಕವಾಗಿರುವ ಈ ಚಿತ್ರಕ್ಕೆ ಇನ್ನೂ ನಾಯಕ ನಟನ ಆಯ್ಕೆ ಬಾಕಿ ಇರುವಾಗಲೇ ಚಿತ್ರತಂಡ ಪ್ರಿಯಾ ವಾರಿಯರ್ ಅವರ ಕಾಲ್ ಶೀಟ್ ಕೇಳಿದ್ದಾಗಿ ಮೂಲಗಳು ಹೇಳಿದೆ.ಭಾನುವಾರ ನಿರ್ದೇಶಕ ರಘು ತ್ರಿಶೂರ್ ನಲ್ಲಿರುವ ನಟಿಯ ಮನೆಯಲ್ಲಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಪ್ರಿಯಾ ವಾರಿಯರ್ ಈ ಕಥೆಯ ಕುರಿತು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದ್ದು ಇನ್ನು ಸಂಭಾವನೆ, ವ್ಯವಹಾರದ ಸಂಬಂಧ ಮಾತುಕತೆ ಪೂರ್ಣವಾದ ನಂತರ ನಟಿ ಕಾಲ್ ಶೀಟ್ ಕೊಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ.
ಚಿತ್ರತಂಡ ಮಲಯಾಳಂ ನಟಿಯನ್ನು ಸ್ಯಾಂಡಲ್ ವುಡ್ ಗೆ ಕರೆತರುಉವಲ್ಲಿ ಯಶಸ್ವಿಯಾಗಲಿದೆಯೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.ಈ ನಡುವೆ ಈ ಹೊಸ ಚಿತ್ರಕ್ಕೆ ಅರ್ಜುನ್ ಜನ್ಯ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಹಾಗೂ ಸತ್ಯ ಹೆಗ್ಡೆ ಅವರನ್ನು ಛಾಯಾಗ್ರಹಣ ಕೆಲಸಕ್ಕಾಗಿ ಚಿತ್ರತಂಡ ಅಂತಿಮಗೊಳಿಸಿದೆ. ಚಿತ್ರದ ಚಿತ್ರೀಕರಣ ಆಗಸ್ಟ್ ನಲ್ಲಿ ಪ್ರಾರಂಬವಾಗಲಿದೆ ಎನ್ನಲಾಗಿದ್ದು ಸ್ಟಾರ್ ನಟರ ಮಕ್ಕಳನ್ನು ನಾಯಕರನ್ನಾಗಿಸಿಕೊಳ್ಲಬೇಕಾ ಅಥವಾ ಇನ್ನಾವುದೇ ಹೊಸಬರನ್ನು ನೋಡಬೇಕಾ ಎನ್ನುವುದನ್ನು ಚಿತ್ರತಂಡ ಇನ್ನೂ ನಿರ್ಧಾರ ಮಾಡಿಲ್ಲ.
SCROLL FOR NEXT