ಬೆಂಗಳೂರು: ಕನ್ನಡ ರ್ಯಾಪರ್ ಹಾಗೂ ಬಿಗ್ ಬಾಸ್ ಐದನೇ ಆವೃತ್ತಿ ವಿಜೇತ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆ ನಿಶ್ಚಿತಾರ್ಥ ಸೋಮವಾರ ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ನೆರವೇರಿತು.
ಖಾಸಗಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು, ಆಪ್ತ ಬಂಧುಗಳು ಮತ್ತು ಹತ್ತಿರದ ಇಬ್ಬರ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದ್ದರು.ಹಸಿರು ಬಣ್ಣದ ರೇಶಿಮೆ ಸೀರೆಯಲ್ಲಿ ನಿವೇದಿತಾ ಕಂಗೊಳಿಸುತ್ತಿದ್ದರು.
ಬಿಗ್ ಬಾಸ್ 5ರ ಸ್ಪರ್ಧಿಗಳಾಗಿದ್ದ ಚಂದನ್-ನಿವೇದಿತಾ ಸ್ಪರ್ಧೆ ಮುಗಿದು ಹೊರಬಂದ ಮೇಲೆ ಬಹಳ ಆತ್ಮೀಯರಾಗಿದ್ದರು. ಅವರಿಬ್ಬರು ಜೋಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಅದಕ್ಕೆ ಈ ಬಾರಿಯ ದಸರಾ ಹಬ್ಬದ ವೇಳೆ ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ನಿವೇದಿತಾಗೆ ಪ್ರೇಮ ನಿವೇದನೆ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.
ಸರ್ಕಾರಿ ಪ್ರಾಯೋಜಿತ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿದ್ದು ಭಾರೀ ಸುದ್ದಿಯಾಗಿ ವ್ಯಾಪಕ ಟೀಕೆಗೆ ಸಹ ಗುರಿಯಾಗಿದ್ದರು. ನಂತರ ಚಂದನ್ ಕ್ಷಮೆ ಕೇಳುವ ಮೂಲಕ ವಿವಾದ ತಣ್ಣಗಾಯಿತು. ಈಗ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಹಸೆಮಣೆ ಏರಲು ಸಜ್ಜಾಗಿದೆ.