ಸಿನಿಮಾ ಸುದ್ದಿ

ಡಾ.ರಾಜ್ 91ನೇ ಜನ್ಮದಿನ: ಸಿಎಂ ಯಡಿಯೂರಪ್ಪ ಸೇರಿ ನಾಡಿನ ಗಣ್ಯರಿಂದ ವರನಟನ ಸ್ಮರಣೆ

Raghavendra Adiga

ಕನ್ನಡದ ಹೆಮ್ಮೆಯ ವರನಟ ಡಾ. ರಾಜ್‍ಕುಮಾರ್ ಅವರ 91ನೇ ಜನ್ಮದಿನಾಚರಣೆಯನ್ನು ನಾಡಿನಾದ್ಯಂತ ಇಂದು ಆಚರಿಸಲಾಗುತ್ತಿದೆ. ಈ ವರ್ಷ ಕೊರೋನಾ ಕಾರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಇರುವ ಕಾರಣ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು ರಾಜ್ ಜನ್ಮದಿನದಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿ ನಾಡಿನ ಹಲವಾರು ಗಣ್ಯರು ಕನ್ನಡ ಕಣ್ಮಣಿಯನ್ನು ಸ್ಮರಿಸಿಕೊಂಡಿದ್ದಾರೆ.

"ನಟ ಸಾರ್ವಭೌಮ - ಕರ್ನಾಟಕ ರತ್ನ ಡಾ. ರಾಜಕುಮಾರರ ಜನ್ಮದಿನದಂದು ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸೋಣ. ತಾಯಿ ಭುವನೇಶ್ವರಿಯ ಸೇವೆಗೆ ಕರೆ ಬಂದಾಗಲೆಲ್ಲ ಎದ್ದು ಬಂದ ಮಹಾನುಭಾವ ರಾಜಣ್ಣನವರು. ಮೂರು ತಲೆಮಾರಿನ ಕನ್ನಡಿಗರಿಗೆ ಮೌಲ್ಯ ತುಂಬಿದ ಮನರಂಜನೆ ನೀಡಿದ ಅವರನ್ನು ಆದರದಿಂದ ನೆನೆಯೋಣ." ಎಂಬುದಾಗಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ "'ಅಭಿಮಾನಿಗಳೇ ದೇವರು' ಎಂದು ಬಣ್ಣಿಸಿದ ವರನಟ ಡಾ. ರಾಜಕುಮಾರ್ ಅವರ ಜನುಮ ದಿನ ಇಂದು. ಅವರ ನೆನಪು ಎಂದೆಂದಿಗೂ ಅಮರ. ನಾಡುನುಡಿಯ ಬಗ್ಗೆ ಅವರ ನಿಲುವು ಅನುಕರಣೀಯ.

"ಕನ್ನಡದ ಅಸ್ಮಿತೆ ಮತ್ತು ಆದರ್ಶವಾಗಿದ್ದ ರಾಜ್ ಅವರ ಸದಭಿರುಚಿಯ ಸಿನಿಮಾಗಳನ್ನು ನೋಡಿ ನಾನು, ನನ್ನಂತಹ ಲಕ್ಷಾಂತರ ಮಂದಿ ಬದುಕಿನಲ್ಲಿ ಸ್ಫೂರ್ತಿ ಕಂಡವರು. ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಇಂತಹ ಮಹಾ ಚೇತನಕ್ಕೆ ನನ್ನ ಪ್ರಣಾಮಗಳು" ಎಂದು ಬರೆದು ವರನಟನನ್ನು ನೆನೆದಿದ್ದಾರೆ.

ಇನ್ನು ರಾಜ್ ಪುತ್ರರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ತಂದೆಯವರ ಹುಟ್ಟುಹಬ್ಬವನ್ನು ಈ ಬಾರಿ ಎಲ್ಲರೂ ಸರಳವಾಗಿ ಮನೆಯಿಂದಲೇಆಚರಿಸುವಂತೆ ಮನವಿ ಮಾಡಿದ್ದಾರೆ.

"ಪ್ರೀತಿಯ ಅಪ್ಪಾಜಿಯ ಹುಟ್ಟು ಹಬ್ಬಕ್ಕೆ ನಮ್ಮ ಅಭಿಮಾನಿಗಳಿಂದ ವಿಶೇಷ ಕಾಮನ್ ಡಿಪಿ. ಅಪ್ಪಾಜಿಯ ಹುಟ್ಟು ಹಬ್ಬವನ್ನು ಈ ಬಾರಿ ನಿಮ್ಮ ನಿಮ್ಮ ಮನೆಯಲ್ಲೆ ಆಚರಿಸಿ ಮನೆಯವರ ಜೊತೆಯಲ್ಲೆ ಆಚರಿಸಿ. #StayHomeStaySafe" ಎಂದು ಅಭಿಮಾನಿಗಳಿಗೆ ಶಿವಣ್ಣ ಸಂದೇಶ ತಿಳಿಸಿದ್ದಾರೆ.

SCROLL FOR NEXT