ಸಿನಿಮಾ ಸುದ್ದಿ

ಎಸ್ ಪಿ ಬಾಲಸುಬ್ರಹ್ಮಣ್ಯಂ ಅನಾರೋಗ್ಯ ಬಗ್ಗೆ ಪುತ್ರ ಎಸ್ ಪಿ ಚರಣ್ ಹೇಳಿದ್ದೇನು? 

Sumana Upadhyaya

ಚೆನ್ನೈ: ನಗರದ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಅವರ ಪುತ್ರ ಎಸ್ ಪಿ ಚರಣ್ ಮಾಹಿತಿ ನೀಡಿದ್ದಾರೆ. 

ಆಸ್ಪತ್ರೆಯ ಮೂರನೇ ಮಹಡಿಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯವರನ್ನು ವಿಶೇಷ ಐಸಿಯು ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಒಂದು ಸಮಾಧಾನಕರ ವಿಷಯವೆಂದರೆ ತಂದೆಯವರು ಸ್ವಲ್ಪ ಚಲನವಲನ ತೋರಿಸಿದ್ದು ವೈದ್ಯರಿಗೆ ಕೈ ಸನ್ನೆ ಮಾಡಿ ತೋರಿಸಿದ್ದಾರೆ. ವೈದ್ಯರನ್ನು ಗುರುತಿಸುವ ಸ್ಥಿತಿಯಲ್ಲಿದ್ದಾರೆ, ಇನ್ನೂ ಕೂಡ ಜೀವರಕ್ಷಕ ಸಾಧನದಲ್ಲಿದ್ದಾರೆ. ಕೆಲ ದಿನಗಳ ಹಿಂದಿಗಿಂತ ಇಂದು ಸ್ವಲ್ಪ ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತಿದೆ. ಆರೋಗ್ಯದಲ್ಲಿ ಸುಧಾರಣೆಯ ಸೂಚನೆ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯ ಚೇತರಿಕೆಯ ಹಾದಿಯಲ್ಲಿ ತಂದೆ ಇದ್ದಾರೆ ಎಂದು ಎಸ್ ಪಿ ಚರಣ್ ತಿಳಿಸಿದ್ದಾರೆ.

ಆಸ್ಪತ್ರೆಯ ವೈದ್ಯರ ತಂಡ ತಂದೆಯವರು ಗುಣಮುಖರಾಗಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಇನ್ನು ಮೊದಲಿನಂತವರಾಗಲು ದೀರ್ಘ ಸಮಯ ಹಿಡಿಯಬಹುದು, ಆದರೂ ನಾವು ಆಶಾವಾದದಲ್ಲಿದ್ದೇವೆ. ಅವರು ಮೊದಲಿನಂತಾಗಿ ಮನೆಗೆ ಮರಳುತ್ತಾರೆ ಎಂಬ ವಿಶ್ವಾಸದಲ್ಲಿದ್ದೇವೆ. ತಂದೆಯವರ ಆರೋಗ್ಯಕ್ಕೆ ನಾವೆಲ್ಲರೂ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ. 

ಎಸ್ ಪಿ ಬಾಲಸುಬ್ರಹ್ಮಂ ಅವರ ಪತ್ನಿ ಕೂಡ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು ಗುಣಮುಖರಾಗುತ್ತಿದ್ದಾರೆ, ನಾಳೆ ಅಥವಾ ನಾಡಿದ್ದು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಎಸ್ ಪಿ ಚರಣ್ ತಿಳಿಸಿದ್ದಾರೆ.

SCROLL FOR NEXT