ಕೆಲ ವರ್ಷಗಳ ಹಿಂದೆಯವರೆಗೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ನಂತರ ರಾಜಕೀಯಕ್ಕೆ ಸೇರಿದ್ದ ಮೋಹಕ ತಾರೆ ರಮ್ಯಾ ಅವರನ್ನು ಚಲನಚಿತ್ರಗಳಲ್ಲಿ ಮತ್ತೆ ನೋಡಬೇಕು, ಅವರು ಅಭಿನಯಿಸಬೇಕು ಎಂದು ಆಸೆ ಹೊಂದಿರುವವರು ಅದೆಷ್ಟೋ ಅಭಿಮಾನಿಗಳಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ನಾಯಕನಟ ದರ್ಶನ್ ಅಭಿನಯದ ಐತಿಹಾಸಿಕ ಬಹು ನಿರೀಕ್ಷಿತ ಚಿತ್ರ ರಾಜಾ ವೀರ ಮದಕರಿ ನಾಯಕ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ರಮ್ಯಾ ಮರಳುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಇದಕ್ಕೆ ರಾಕ್ ಲೈನ್ ವೆಂಕಟೇಶ್ ಅವರೇ ಉತ್ತರ ಕೊಟ್ಟಿದ್ದು, ರಮ್ಯಾ ಅವರನ್ನು ಚಿತ್ರಕ್ಕೆ ಕರೆತರುವ ಯೋಚನೆಯಿಲ್ಲ, ನಮ್ಮ ಮನಸ್ಸಿನಲ್ಲಿ ಚಿತ್ರಕ್ಕೆ ರಮ್ಯಾ ಅವರು ನಾಯಕಿಯಾಗಿ ಹೊಂದಿಕೆಯಾಗುತ್ತಾರೆ ಎಂದು ಅನಿಸುತ್ತಿಲ್ಲ, ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ತಾರೆ ನಯಂತಾರಾ ಅವರನ್ನು ನಾಯಕಿ ಮಾಡಲಾಗುತ್ತಿದೆ ಎಂದು ಕೇಳಿಬರುತ್ತಿದೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ರಾಜಾ ವೀರ ಮದಕರಿ ಚಿತ್ರದ ಮೊದಲ ಶೆಡ್ಯೂಲ್ ಲಾಕ್ ಡೌನ್ ಗಿಂತ ಮೊದಲೇ ಕೇರಳದಲ್ಲಿ ಪೂರ್ಣವಾಗಿತ್ತು. ಈ ತಿಂಗಳು ಮತ್ತೆ ಶೂಟಿಂಗ್ ಆರಂಭವಾಗಬೇಕಿತ್ತು, ಆದರೆ ಕೊರೋನಾ ಕೇಸು ಹೆಚ್ಚಾಗುತ್ತಿರುವುದಿಂದ ಮುಂದೂಡಲಾಗಿದೆ.
ಬೆಂಗಳೂರು, ಚಿತ್ರದುರ್ಗ, ಮುಂಬೈ, ಹೈದರಾಬಾದ್, ರಾಜಸ್ತಾನಗಳಲ್ಲಿ ಶೂಟಿಂಗ್ ನಡೆಸಲು ತಂಡ ಯೋಚಿಸುತ್ತಿದ್ದು, ಯಾವಾಗ ಆರಂಭ ಎಂದು ಇನ್ನೂ ನಿರ್ಧರಿಸಿಲ್ಲ. ದರ್ಶನ್ ಜೊತೆಗೆ ಸುಮಲತಾ ಅಂಬರೀಷ್ ಕೂಡ ನಟಿಸುತ್ತಿದ್ದಾರೆ. ಹಂಸಲೇಖ ಸಂಗೀತ ಮತ್ತು ಅಶೋಕ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ.