ಸಿನಿಮಾ ಸುದ್ದಿ

'ಡೊಳ್ಳು' ಸಿನಿಮಾ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ನಿರ್ದೇಶಕ ಪವನ್ ಒಡೆಯರ್ ಪ್ರವೇಶ

Nagaraja AB

ಬೆಂಗಳೂರು: ಗೋವಿಂದಾಯ ನಮಹ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಇದೀಗ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಒಡೆಯರ್ ಮೂವಿಸ್' ಎನ್ನುವ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿರುವ ಪವನ್ ಮೊದಲ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಇವರ ಬ್ಯಾನರ್ ಅಡಿಯಲ್ಲಿ 'ಡೊಳ್ಳು' ಮೊದಲ ಸಿನಿಮಾವಾಗಿ ನಿರ್ಮಾಣವಾಗುತ್ತಿದೆ. ಸಾಗರ್ ಪುರಾಣಿಕ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಗರ್ ಪುರಾಣಿಕ್ ಇದಕ್ಕೂ ಮುನ್ನ ಮಹಾನ್ ಹುತಾತ್ಮ ಕಿರುಚಿತ್ರ ನಿರ್ಮಾಣ ಮಾಡಿ, ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಡೊಳ್ಳು ಹೆಸರೇ ಹೇಳುವಂತೆ ಇದೊಂದು ಜಾನಪದ ನೃತ್ಯವಾದ ಡೊಳ್ಳು ಕುಣಿತದ ಬಗ್ಗೆಗಿನ ಸಿನಿಮಾವಾಗಿದೆ. ಕಿರುತೆರೆ ನಟ ಕಾರ್ತಿಕ್ ಮಹೇಶ್, ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಲಿದ್ದಾಪರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಡೊಳ್ಳು ಈಗ ಪೋಸ್ಟ್ ಪ್ರೊಢಕ್ಷನ್ ಹಂತದಲ್ಲಿದ್ದು, ತನ್ನ ಮೊದಲ ಸಿನಿಮಾದ ಸಂತಸವನ್ನು ಹಂಚಿಕೊಂಡ ನಟ ಸಾಗರ್ ಪುರಾಣಿಕ್, ನನ್ನ ಕನಸು ನನಸಾಗಿದೆ. ಪವನ್ ಒಡೆಯರ್ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ತಮ್ಮನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.

ಶ್ರಿನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಸ್ ಕಲಾಥಿ ಅವರ ಛಾಯಾಗ್ರಹಣವಿರಲಿದೆ. ಬಿಎಸ್ ಕೆಂಪರಾಜು ಅವರ ಸಂಕಲನವಿರಲಿದೆ. 

SCROLL FOR NEXT