ಸಿನಿಮಾ ಸುದ್ದಿ

ಹಿರಿಯ ನಟ ಕಿಲ್ಲರ್ ವೆಂಕಟೇಶ್ ಗೆ ಅನಾರೋಗ್ಯ, ಕಲಾವಿದನ ಬೆನ್ನಿಗೆ ನಿಂತ ಜಗ್ಗೇಶ್

Raghavendra Adiga

ಸ್ಯಾಂಡಲ್ ವುಡ್ ಹಿರಿಯ ನಟ ಕಿಲ್ಲರ್ ವೆಂಕಟೇಶ್ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಕನ್ನಡದಲ್ಲಿ ಇನ್ನೂರೈವತ್ತಕ್ಕೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಕಿಲ್ಲರ್ ವೆಂಕಟೇಶ್ ಯಕೃತ್ತು ವೈಫಲ್ಯ (ಲಿವರ್ ವೈಫಲ್ಯ) ದಿಂದ ಬಳಲುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಅವರನ್ನು ಸಧ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪ್ತರೆಗೆ ದಾಖಲಿಸಲಾಗಿದೆ.

ಆರ್ಥಿಕ ಮುಗ್ಗಟ್ಟಿನಿಂದ ಕೂಡಿದ ಅವರ ಕುಟುಂಬಕ್ಕೆ ನಟನ ಚಿಕಿತ್ಸಾ ವೆಚ್ಚ ಭರಿಸಲು ಸಹ ಆಗುತ್ತಿಲ್ಲ ಎನ್ನುವುದು ಖೇದಕರ ಸಂಗತಿ. ಈ ಬಗೆಗೆ ಸ್ಯಾಂಡಲ್ ವುಡ್ ನವರಸನಾಯಕ ಜಗ್ಗೇಶ್ ಟ್ವಿಟ್ ಮಾಡಿದ್ದು ಹಿರಿಯ ನಟನಿಗೆ ಚಿತ್ರರಂಗದ ನಟ, ನಿರ್ಮಾಪಕರು ನೆರವು ನೀಡಿರೆಂದು ಮನವಿ ಮಾಡಿಕೊಂಡಿದ್ದಾರೆ.

"ವೈಯಕ್ತಿಕವಾಗಿ ಅವನ ಹಾರೈಕೆಗೆ ವಿನಂತಿಸಲು ವಿಕ್ಟೋರಿಯಾ ಆಸ್ಪತ್ರೆಗೆತೆರಳುತ್ತಿರುವೆ. ..ಕಷ್ಟದಲ್ಲಿ ಇರುವ ಚಿತ್ರರಂಗದ ಹಿರಿಯರಿಗೆ  ಭುಜಕೊಡುವ ಗುಣ ಇಂದಿನವರು ಅಳವಡಿಸಿಕೊಳ್ಳಲು ನಾಂದಿಹಾಡುವೆ!. ವಾಣಿಜ್ಯ ಮಂಡಳಿ ಃಆಗೂ ನಿರ್ಮಾಪಕರ ಸಂಘಕ್ಕೆ ಕೈಜೋಡಿಸಲು ಹೇಳಿರುವೆ!" ಎಂದು ಬರೆದಿದ್ದಲ್ಲದೆ ವಿಶೇಷ ಕಾಳಜಿ ತೋರಿದ ಸಾ.ರಾ ಗೋವಿಂದ್, ಭಾ.ಮಾ. ಹರೀಶ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ನವರಸನಾಯಕ ಜಗ್ಗೇಶ್ ಮನವಿಗೆ ಸ್ಪಂದಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಸಹ ವೆಂಕಟೇಶ್ ನೆರವಿಗೆ ಬಂದಿದ್ದಾರೆ. 

ಕಿಲ್ಲರ್ ವೆಂಕಟೇಶ್ ಕನ್ನಡದ ಯಶಸ್ವಿ ಚಿತ್ರ "ರಣಧೀರ" ಸೇರಿ ಹಲವಾರು ಚಿತ್ರಗಳಲ್ಲಿ ಖಳನಟ ಹಾಗೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

SCROLL FOR NEXT