ಸಿನಿಮಾ ಸುದ್ದಿ

ಸದ್ದಿಲ್ಲದೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಮಯೂರಿ

Manjula VN

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನಮನ ಗೆದ್ದು, ಕೃಷ್ಣ ಲೀಲಾ ಸಿನಿಮಾ ಮೂಲಕ ಸ್ಯಾಂಡಲ್'ವುಡ್'ನಲ್ಲಿ ಸದ್ದು ಮಾಡಿದ್ದ ನಟಿ ಮಯೂರಿಯವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಮಯೂರಿಯವರ ವಿವಾಹ ಸರಳವಾಗಿ ನೆರವೇರಿದೆ. 

ಬಾಲ್ಯದ ಗೆಳೆಯ ಅರುಣ್ ಅವರೊಂದಿಗೆ ಮಯೂರಿಯವರು ಸಪ್ತಪದಿ ತುಳಿದಿದ್ದಾರೆ. ಕಳೆದ 10 ವರ್ಷಗಳಿಂದ ಇಬ್ಬರು ಪ್ರೀತಿಯಲ್ಲಿದ್ದರು ಎಂದು ತಿಳಿದುಬಂದಿದೆ. 

ಅರುಣ್ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉಧ್ಯೋಗಿಯಾಗಿದ್ದಾರೆ. ಜರ್ಮನಿಯಲ್ಲಿ ಇದ್ದ ಮಯೂರಿಯವರ ಅಕ್ಕ ಬೆಂಗಳೂರಿಗೆ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಮರಳಿ ಜರ್ಮನಿಗೆ ಮರಳಿದ್ದಾರೆ. ಹೀಗಾಗಿ ಅವರ ಸಮ್ಮುಖದಲ್ಲಿಯೇ ಮದುವೆ ನಡೆಯಬೇಕೆಂಬ ಕಾರಣಕ್ಕೆ ಕೂಡಲೇ ಮದುವೆ ಕಾರ್ಯ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿತ್ತು ಎನ್ನಲಾಗುತ್ತಿದೆ. 

ಕೊರೋನಾ ಹಿನ್ನೆಲೆಯಲ್ಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿದ್ದು, ದೇವಸ್ಥಾನದಲ್ಲಿ ಸರಳವಾಗಿ ವಿವಾಹ ನೆರವೇರಿಸಲಾಗಿದೆ. 

ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಪ್ರಸಿದ್ಧಿಗೆ ಬಂದವರು ಮಯೂರಿ, ಆ ನಂತರ ಶಶಾಂಕ್ ನಿರ್ದೇಶನದ ಕೃಷ್ಣ ಲೀಲಾ ಚಿತ್ರದ ಮೂಲಕ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಮುಂದೆ ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2, ರ್ಯಾಂಬೋ 2, ರುಸ್ತುಂ ನನ್ನ ಪ್ರಕಾರ ಮುಂತಾದ ಚಿತ್ರಗಳಲ್ಲೂ ಮುಖ್ಯ ಪಾತ್ರ ಮಾಡಿದ್ದಾರೆ. ತೆಲುಗಿನಲ್ಲೂ ಒಂದು ಚಿತ್ರದಲ್ಲಿ ನಟಿಸಿದ್ದು, ಅದು ಬಿಡುಗಡೆಯಾಗಬೇಕಿದೆ. 

SCROLL FOR NEXT