ಲೊಂಡನಹಳ್ಳಿ ಲಂಬೋದರ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ರಾಜ್ ಸೂರ್ಯ ತಮ್ಮ ಎರಡನೇ ಚಿತ್ರದ ಚಿತ್ರೀಕರಣಕ್ಕೆ ಸಿದ್ದರಾಗಿದ್ದಾರೆ, ಅದು ಬೆಂಗಳೂರು ಬಾಯ್ಸ್.
ಇಲ್ಲಿ ಬಹು ಕಲಾವಿದರ ತಾರಾಗಣವಿದ್ದು ವಿ ಮೂವೀಸ್ ಮೇಕರ್ಸ್ ಪ್ರಸ್ತುತಪಡಿಸಿ ವಿಕ್ರಮ್ ಕೆ ಯಲ್ಲಯ್ಯ ನಿರ್ಮಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಶಿವರಾತ್ರಿಗೆ ಬಿಡುಗಡೆಯಾಗಿದ್ದು ಕಲಾವಿದರ ಆಯ್ಕೆ ಅಂತಿಮವಾಗುತ್ತಿದೆ.
ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಾಲ್ಕು ಮುಖ್ಯ ನಟರು ಇದ್ದಾರೆ. ಹ್ಯಾಪಿ ಬರ್ತ್ ಡೇ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಚಿನ್ ಚೆಲುವರಾಯಸ್ವಾಮಿ, ಇರುವುದೆಲ್ಲವ ಬಿಟ್ಟು ಚಿತ್ರದ ಶ್ರೀ ಮಹದೇವ ಆಯ್ಕೆ ನಡೆದಿದ್ದು, ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಜೊತೆ ಮಾತುಕತೆ ನಡೆಯುತ್ತಿದೆ.ನಾಲ್ಕನೇ ಕಲಾವಿದನ ಮತ್ತು ಉಳಿದ ಸಪೋರ್ಟಿಂಗ್ ನಟರ ಆಯ್ಕೆಗೆ ಆಡಿಶನ್ ನಡೆಯುತ್ತಿದೆ.
ನಾಯಕಿ ಪಾತ್ರಕ್ಕೆ ವೈನಿಧಿ ಜಗ್ಗೇಶ್ ಆಯ್ಕೆಯಾಗಿದ್ದಾರೆ. ಅವರು ಈಗಾಗಲೇ ತಮ್ಮ ತಾಯಿ ವಿಜಯಲಕ್ಷ್ಮಿ ಸಿಂಗ್ ಅವರ ಯಾನ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದರು.
ರಿಜೊ ಪಿ ಜಾನ್ ಛಾಯಾಗ್ರಹಣ, ಆಲ್ ಒಕೆ ಸಂಗೀತವಿದೆ. ಇನ್ನೊಂದು ವಾರದಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.