ಸಿನಿಮಾ ಸುದ್ದಿ

'ನಿಮ್ಮ ಸ್ಮರಣೆಯೇ ಅಮರ ಪ್ರೀತಿ' ಎಂದ ಸುಮಲತಾ, ಅಂಬಿ ಹುಟ್ಟುಹಬ್ಬಕ್ಕೆ ಸಿಎಂ ಸೇರಿ ಗಣ್ಯರ ನಮನ

Raghavendra Adiga

ಇಂದು ದಿವಂಗತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ 68ನೇ ಜನ್ಮದಿನ. ಕೊರೋನಾ ಲಾಕ್ ಡೌನ್ ಕಾರಣ, ಅವರ ಸಮಾಧಿಯ ಬಳಿಗೆ ತೆರಳಲಾಗದೆ, ಅಭಿಮಾನಿಗಳು ಸರಳವಾಗಿ ಹುಟ್ದಬ್ಬ ಆಚರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಂತೂ ಅಭಿಮಾನದ ಮಹಾಪೂರವೇ ಹರಿದು ಬರುತ್ತಿದೆ. ಪತ್ನಿ ಸುಮಲತಾ, “ ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ” ಎಂದು ಟ್ವೀಟ್ ಮಾಡಿದ್ದಾರೆ. 

ಅಷ್ಟೇ ಅಲ್ಲದೆ " ವಿಧಿ ಅವರನ್ನು ನಮ್ಮಿಂದ ಶಾಶ್ವತವಾಗಿ ದೂರ ಮಾಡಿದೆ. ಅವರ ಹೃದಯ ಬ್ರಹ್ಮಾಂಡದಷ್ಟು ವಿಶಾಲವಾಗಿತ್ತು. ಜೀವನದಲ್ಲಿ ಅವರೊಡನೆ ಕೆಲ ಹೆಜ್ಜೆ ಹಾಕಿದ್ದಕ್ಕಾಗಿ ನನಗೆ ಹೆಮ್ಮೆ ಇದೆ" ಎಂದು ಇನ್ನೊಂದು ಟ್ವೀಟ್ ಮಾಡಿ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ್, ಗಣ್ಯರ ನಮನ

ಮಾಜಿ ಸಚಿವ, ಜನಪ್ರಿಯ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ, ಮಾಜಿ ಸಚಿವ, ಜನಪ್ರಿಯ ಕಲಾವಿದ ಮತ್ತು ನನ್ನ ಆತ್ಮೀಯರಾಗಿದ್ದ ಅಂಬರೀಶ್ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಅವರ ನೆನಪು, ಅವರ ವ್ಯಕ್ತಿತ್ವ, ಅವರು ಮಾಡಿದ್ದ ಪಾತ್ರಗಳ ಮೂಲಕ ಅಂಬರೀಶ್ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ ಮಾಡಿ, ಇವತ್ತು ನಾಡು ಕಂಡ ಅಪರೂಪದ ಜನಾನುರಾಗಿ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನ. ಚಿತ್ರರಂಗ ಮತ್ತು ರಾಜಕೀಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಶ್ ಕನ್ನಡಿಗರ ಪಾಲಿಗೆ ಎಂದಿಗೂ ಲೆಜೆಂಡ್ ಆಗಿಯೇ ಉಳಿದಿದ್ದಾರೆ. ಅವರ ನೆನಪುಗಳ ಜೊತೆಗೆ ಎಲ್ಲ ಅಭಿಮಾನಿಗಳಿಗೂ ಅಂಬರೀಶ್ 68ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ

ಕಿಚ್ಚ ಸುದೀಪ್ ಕೂಡ ಅಂಬರೀಶ್ ಹುಟ್ತುಹಬ್ಬಕ್ಕೆ ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಮಂಡ್ಯದ ಗಂಡು, ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವ, ಅಭಿಮಾನಿಗಳ ಪ್ರೀತಿಯ ರೆಬೆಲ್ ಸ್ಟಾರ್, ದಿವಂಗತ ಅಂಬರೀಷ್ ಅವರ ಜನ್ಮದಿನದಂದು, ಕನ್ನಡ ಸಿನಿಮಾ ಲೋಕಕ್ಕೆ ಅವರು ಕೊಟ್ಟ ಕಲಾಸೇವೆಗೆ ಅನಂತ ನಮನಗಳು ಎಂದು ಸ್ಮರಿಸಿದ್ದಾರೆ.

SCROLL FOR NEXT