ಸಿನಿಮಾ ಸುದ್ದಿ

ಅಪ್ಪು ಕನಸು 'ಗಂಧದ ಗುಡಿ'ಗೆ ಮೆಚ್ಚುಗೆಯ ಮಹಾಪೂರ: ಅದ್ಭುತ ದೃಶ್ಯಕಾವ್ಯ ಎಂದ ಸಿಎಂ, ಸೆಲೆಬ್ರಿಟಿಗಳಿಂದ ಪ್ರಶಂಸೆ

Sumana Upadhyaya

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನ ಈ ಸುಂದರ ದೃಶ್ಯಕಾವ್ಯದ ಟೈಟಲ್ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಅದು ಸಾಕಾರಗೊಳ್ಳುವ ಮೊದಲೇ ಅದರ ನಿರ್ಮಾತೃ ಪುನೀತ್ ಇನ್ನಿಲ್ಲವಾದರು.

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಯುವರತ್ನ, ಅಭಿಮಾನಿಗಳ ಪಾಲಿನ ಅಪ್ಪು ಅವರ ಕನಸಿನ ಕೂಸು ಗಂಧದ ಗುಡಿ. ಕರ್ನಾಟಕದ ಹಲವು ಸುಂದರ ಪರಿಸರಗಳು, ಕಾಡುಗಳು, ಗುಡ್ಡ, ಬೆಟ್ಟಗಳನ್ನು ಸುತ್ತಿ ಅಲ್ಲಿನ ಸುಂದರ ದೃಶ್ಯಗಳು, ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಸೆರೆಹಿಡಿದು ತಯಾರಿಸಿರುವ ಒಂದು ದೀರ್ಘ(Lengthy film) ಚಿತ್ರವಿದು.

ಪುನೀತ್ ರಾಜ್ ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಇದು. ಗಂಧದ ಗುಡಿ ಎಂದು ಹೆಸರನ್ನಿಟ್ಟು ಇದಕ್ಕೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿದ್ದರು. ಚಿತ್ರ ನೈಜವಾಗಿ ಮೂಡಿಬರಬೇಕೆಂದು ಎಲ್ಲಿಯೂ ಬಣ್ಣ ಹಚ್ಚದೆ ನೈಜವಾಗಿಯೇ ನಟಿಸಿದ್ದಾರೆ. ಇದಕ್ಕೆ ಅಪ್ಪು ಅವರಿಗೆ ಸಾಥ್ ನೀಡಿದವರು ನಿರ್ದೇಶಕ ಅಮೋಘ ವರ್ಷ.

ಪುನೀತ್ ನಿಧನರಾದರೆಂದು ಗಂಧದ ಗುಡಿಯ ಕೆಲಸ ನಿಲ್ಲಲಿಲ್ಲ. ಅವರ ಪತ್ನಿ ಅಶ್ವಿನಿ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಇಂದು ಪಾರ್ವತಮ್ಮ ರಾಜ್ ಕುಮಾರ್ ಅವರ ಜನ್ಮಜಯಂತಿ ದಿನ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಮುಂದಿನ ವರ್ಷ ಆರಂಭದಲ್ಲಿ ಚಿತ್ರ ತೆರೆಗೆ ಬರಲಿದೆ.

ಇಂದು ಟೀಸರ್ ಬಿಡುಗಡೆಯಾಗಿದ್ದೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಟ್ವಿಟ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಹ್ಯಾಶ್ ಟ್ಯಾಗ್ ಬಳಸಿ ಟೀಸರ್ ನ್ನು ಹಲವರು ಮೆಚ್ಚಿ ಪ್ರಶಂಸೆಯ ನುಡಿಗಳನ್ನಾಡಿದ್ದಾರೆ. ಸಾಕಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ. ಇನ್ನು ಚಿತ್ರರಂಗದ ಕಲಾವಿದರು ಕೂಡ ಈ ಮೂಲಕ ಅಪ್ಪುವನ್ನು ಮತ್ತೆ ತೆರೆಯ ಮೇಲೆ ಕಣ್ತುಂಬಿಕೊಳ್ಳುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಸರ್ ಬಗ್ಗೆ ಉತ್ತಮ ಮಾತುಗಳನ್ನಾಡಿ ಇದೊಂದು ಅದ್ಭುತ ದೃಶ್ಯಕಾವ್ಯ ಎಂದು ಹೇಳಿದ್ದಾರೆ.ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ ಎಂದು ಆಶಿಸಿದ್ದಾರೆ. 

SCROLL FOR NEXT