ಸಿನಿಮಾ ಸುದ್ದಿ

ಹೊಸ ಅವತಾರದಲ್ಲಿ ನನ್ನನ್ನು ನಾನು ನೋಡಿಕೊಳ್ಳಲು ಕಾತುರ, ಉತ್ಸುಕನಾಗಿದ್ದೇನೆ: ಪುನೀತ್ ರಾಜ್ ಕುಮಾರ್

Manjula VN

ವಿಜಯ್ ಕಿರಗಂದೂರು ಹಾಗೂ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸ್ವಂತ ಕುಟುಂಬದವರೊಂದಿಗೆ ಮಾಡಿದಂತಿದೆ. ಪವನ್ ಅವರ ಕೆಲಸ ಕುತೂಹಲ ಕೆರಳಿಸುತ್ತಿರುತ್ತದೆ. ಚಿತ್ರದೊಂದಿಗೆ ಕೆಲಸ ಮಾಡಲು ಸಾಕಷ್ಟು ಉತ್ಸುಕನಾಗಿದ್ದು, ಚಿತ್ರದಲ್ಲಿ ನನ್ನ ಹೊಸ ಅವತಾರವನ್ನು ನೋಡಿಕೊಳ್ಳಲು ಕಾತುರನಾಗಿದ್ದೇನೆಂದು ದ್ವಿತ್ವ ಚಿತ್ರದ ಕುರಿತು ನಟ ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದಾರೆ. 

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ಪುನೀತ್ ರಾಜ್‌ಕುಮಾರ್‌ ಅಭಿನಯದಲ್ಲಿ ದ್ವಿತ್ವ ಚಿತ್ರ ಮೂಡಿಬರುತ್ತಿದ್ದು, ಇದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 9ನೆಯ ಚಿತ್ರವಾಗಿದೆ. 

ಲೂಸಿಯಾ ಚಿತ್ರದ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ಪವನ್‌ ಕುಮಾರ್‌ ಚಿತ್ರದ ನಿರ್ದೇಶನದ ಸಾರಥ್ಯ ವಹಿಸಿದ್ದು, ಮನೋವಿಜ್ಞಾನದ ಹಿನ್ನೆಲೆಯ ಕಥೆಯೇ ದ್ವಿತ್ವ ಚಿತ್ರವಾಗಿದೆ. 

2018ರಲ್ಲಿ ಬಂದ ಯುಟರ್ನ್‌ ಚಿತ್ರದ ಬಳಿಕ ಪವನ್‌ ಅವರು ಕೈಗೆತ್ತಿಕೊಳ್ಳುತ್ತಿರುವ ಚಿತ್ರ ಇದು. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿದ್ದು, ಸೆಪ್ಟೆಂಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಪ್ರೀತಾ ಜಯರಾಮನ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. 

ಮೊದಲು ಚಿತ್ರಕ್ಕೆ ಕಥೆ ಬರೆದಿದ್ದೆ. ನಂತರ ಅದನ್ನು ಅತ್ಯುತ್ತಮವಾಗಿ ವಿವರಿಸುವ ಶೀರ್ಷಿಕೆಗಾಗಿ ಹುಡುಕಾಟ ಆರಂಭಿಸಿದ್ದೆ. ದ್ವಿತ್ವ ಹೆಸರು ಆಲೋಚನೆಗೆ ಬಂದಿತ್ತು. ನಂತರ ಅದರ ಅರ್ಥ ಮತ್ತು ಧ್ವನಿ ಬಹಳ ಇಷ್ಟವಾಗಿತ್ತು. ಚಿತ್ರದ ಟೈಟಲ್'ಗೆ ಪನೀತ್ ರಾಜ್ ಕುಮಾರ್ ಹಾಗೂ ಹೊಂಬಾಳೆ ಫಿಲ್ಸ್ಮ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂತಸ ತಂದಿದೆ. ಚಿತ್ರವು ಸೈಕಾಲಿಕಲ್ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದ್ದು, ಸೆಪ್ಟಂಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿಂತನೆಗಳು ನಡೆಯುತ್ತಿವೆ ಎಂದು ನಿರ್ದೇಶಕ ಪವನ್‌ ಕುಮಾರ್‌ ಅವರು ಹೇಳಿದ್ದಾರೆ. 

ಪವನ್ ಅವರು ಪ್ರಸ್ತುತ ತಮ್ಮ ತೆಲುಗು ವೆಬ್ ಸರಣಿಯ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದ್ದು, ಪುನೀತ್ ರಾಜ್ ಕುಮಾರ್ ಅವರು ಜೂನ್.5ರಿಂದ ಪುನರಾರಂಭವಾಗುತ್ತಿರುವ ಚೇತನ್ ಕುಮಾರ್ ಅವರ ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಸಜ್ಜಾಗುತ್ತಿದ್ದಾರೆ.

SCROLL FOR NEXT