ಸಿನಿಮಾ ಸುದ್ದಿ

'ಪುನೀತ್‌ ಅವರನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನಿಸಿದ್ದೆವು: ತಂದೆಯ ಹಾದಿ ಬಿಡುವುದಿಲ್ಲ ಎಂದು ದೂರವೇ ಉಳಿದಿದ್ದರು!'

Shilpa D

ಬೆಂಗಳೂರು: ‘ಪುನೀತ್‌ ರಾಜ್‌ಕುಮಾರ್‌ ಅವರನ್ನು ರಾಜಕೀಯಕ್ಕೆ ಕರೆತರಲು ನಾನು ಮತ್ತು ಸಿದ್ದರಾಮಯ್ಯ ಪ್ರಯತ್ನಿಸಿದ್ದೆವು. ಆದರೆ, ನಾನು ತಂದೆಯ ಹಾದಿ ಬಿಡುವುದಿಲ್ಲ ಎಂದು ಹೇಳಿ ರಾಜಕೀಯದಿಂದ ಅವರು ದೂರ ಉಳಿದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ಮರಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪುನೀತ್‌ ಅವರಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ‘ಅವರ ಅತ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ, ತಂದೆಯ ದಾರಿ ಬಿಡುವುದಿಲ್ಲ ಎಂಬ ಬದ್ಧತೆಗಾಗಿ ಪ್ರಚಾರಕ್ಕೂ ಹೋಗಲಿಲ್ಲ‘ ಎಂದರು.

ಪುನೀತ್ ಕುಟುಂಬದವರು ಅಜಾತಶತ್ರುಗಳು. ಅವರಲ್ಲಿ ಸಾಮಾಜಿಕ ಕಳಕಳಿ, ಬದ್ಧತೆ ಇದೆ. ಸರ್ಕಾರದ ಕಾರ್ಯಕ್ರಮಗಳಿಗೆ ಯಾವುದೇ ಹಣ ಪಡೆಯದೆ ರಾಯಭಾರಿಯಾಗಿ ಅವರು ಕೆಲಸ ಮಾಡಿದ್ದರು. ನನ್ನ ಚಿತ್ರಮಂದಿರಗಳ ಸಮೂಹದ ಅನಾವರಣಕ್ಕೆ ಬರಬೇಕು ಎಂದು ಇತ್ತೀಚೆಗೆ ಅವರನ್ನು ಆಹ್ವಾನಿಸಿದ್ದೆ. ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರೆ ಮನಸ್ಸಿಗೆ ತೀವ್ರ ನೋವಾಗುತ್ತದೆ. ಭಗವಂತ ಎಷ್ಟು ಕ್ರೂರಿ ಎಂಬುದಕ್ಕೆ ಪುನೀತ್‌ ನಿಧನ ಸಾಕ್ಷಿ’ ಎಂದು ಭಾವುಕರಾದರು.

ಪುನೀತ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ ಅವರು, ‘ಜೀವನದಲ್ಲಿ ಜನರಿಗೆ ಏನು ಸಹಾಯ ಮಾಡಬೇಕೊ ಅದನ್ನು ಅವರು ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಮಿತಾಬ್ ಬಚ್ಚನ್ ಅವರ ಎತ್ತರಕ್ಕೆ ಬೆಳೆಯುವ ಸಾಮರ್ಥ್ಯ ಪುನೀತ್ ಅವರಲ್ಲಿತ್ತು’ ಎಂದರು.

SCROLL FOR NEXT