ಸಿನಿಮಾ ಸುದ್ದಿ

ಪುನೀತ್ ಸಾವಿನ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿರುವ ಕುಟುಂಬ: ಅಭಿಮಾನಿಗಳ ಜೊತೆ ಭಜರಂಗಿ 2 ಚಿತ್ರ ವೀಕ್ಷಿಸಿದ ಶಿವಣ್ಣ

Sumana Upadhyaya

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ಸಾವಿನ ಆಘಾತದಿಂದ ಅವರ ಕುಟುಂಬಸ್ಥರು ನಿಧಾನವಾಗಿ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ತಂದೆಯ ಸಾವಿನ ಹಿನ್ನೆಲೆಯಲ್ಲಿ ಕಳೆದ ತಿಂಗಳು 30ರಂದು ಬೆಂಗಳೂರಿಗೆ ಬಂದಿದ್ದ ಪುನೀತ್ ಅವರ ಹಿರಿಯ ಪುತ್ರಿ ಧೃತಿ ನಿನ್ನೆ ಅಮೆರಿಕದ ನ್ಯೂಯಾರ್ಕ್ ಗೆ ವಾಪಾಸ್ಸಾಗಿದ್ದಾರೆ. 

ಪುನೀತ್ ಅವರ ಪುತ್ರಿ ನ್ಯೂಯಾರ್ಕ್ ನಲ್ಲಿ ಉನ್ನತ ಶಿಕ್ಷಣ ಗಳಿಸುತ್ತಿದ್ದಾರೆ. ಇನ್ನೊಂದೆಡೆ ಇಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಅನುಪಮಾ ಚಿತ್ರಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಅಭಿಮಾನಿಗಳ ಜೊತೆ ತಮ್ಮ ಭಜರಂಗಿ2 ಚಿತ್ರವನ್ನು ವೀಕ್ಷಿಸಿದರು. ಈ ಮೂಲಕ ತಮ್ಮ ಕೆಲಸಕ್ಕೆ ಮರಳಿ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಲ್ಲಲು ಮತ್ತು ಅಭಿಮಾನಿಗಳಿಗೆ ಖುಷಿ ನೀಡಲು ಮುಂದಾಗಿದ್ದಾರೆ. 

ಕಳೆದ ತಿಂಗಳು ಅಕ್ಟೋಬರ್ 29ರಂದು ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರ ಬಿಡುಗಡೆಯಾಗಿತ್ತು. ಅದೇ ದಿನ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾ ಶೋ ರದ್ದಾಗಿತ್ತು. 

ಇನ್ನು ಪುನೀತ್ ಅವರ ಮತ್ತೊಬ್ಬ ಸೋದರ ನಟ ರಾಘವೇಂದ್ರ ರಾಜ್ ಕುಮಾರ್ ಸಹ ತಮ್ಮನ ನೆನಪನ್ನು ಸದಾ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಪುನೀತ್ ಸಮಾಧಿಯಿರುವ ಕಂಠೀರವ ಸ್ಟುಡಿಯೊಕ್ಕೆ ಇಂದು ಬೆಳಗ್ಗೆ ಸಹ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. 

SCROLL FOR NEXT