ಸಿನಿಮಾ ಸುದ್ದಿ

ಕನ್ನಡ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ ತೆಲುಗು ನಟ ವಿಷ್ಣು ಮಂಚು

Manjula VN

ಕನ್ನಡದ ಕಾಂತಾರ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತೆಲುಗಿನ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ, ನಟ ವಿಷ್ಣು ಮಂಚು ಅವರು, ಭವಿಷ್ಯದಲ್ಲಿ ಕನ್ನಡ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ವಿಷ್ಣು ಮಂಚು ಅವರು 'ಜಿನ್ನಾ' ಎಂಬ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು, ಸಿನಿಮಾವು ಅಕ್ಟೋಬರ್ 21ರಂದು ಬಿಡುಗಡೆಯಾಗಲಿದೆ. ತೆಲುಗು ಮಾತ್ರವಲ್ಲದೆ, ಹಿಂದಿ ಮತ್ತು ಮಲಯಾಳಂನಲ್ಲೂ ಜಿನ್ನಾ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ವಿಷ್ಣು ಮಂಚು ಅವರು ಆಗಮಿಸಿದ್ದು, ಕನ್ನಡದ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದರು.

ಕನ್ನಡ ಚಿತ್ರರಂಗಕ್ಕೆ ಹಾಗೂ ದಕ್ಷಿಣ ಭಾರತದ ಚಿತ್ರರಂಗಕ್ಕೆ ಇದೀಗ ಒಳ್ಳೆಯ ಸಮಯ ಬಂದಿದೆ. "ಒಂದು ಸಿನಿಮಾ ಚೆನ್ನಾಗಿದ್ದರೆ ಯಾವುದೇ ಭಾಷೆಯಾದರೂ ಇಡೀ ಭಾರತವೇ ಆ ಸಿನಿಮಾವನ್ನು ನೋಡುತ್ತದೆ ಎಂಬುದಕ್ಕೆ ಕಾಂತಾರ ಒಂದು ಕ್ಲಾಸಿಕ್ ಎಕ್ಸಾಂಪಲ್ ಆಗಿದೆ ಎಂದರು. ಅಲ್ಲದೆ, ಭವಿಷ್ಯದಲ್ಲಿ ಕನ್ನಡ ಸಿನಿಮಾ ಮಾಡುವ ಇಂಗಿತವನ್ನು ವಿಷ್ಣು ಮಂಚು ಅವರು ವ್ಯಕ್ತಪಡಿಸಿದರು. 

ಬಳಿಕ ಕನ್ನಡ ಚಿತ್ರರಂಗದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ವಿಷ್ಣು ಮಂಚು ಅವರು, ಹಿರಿಯ ನಟ ಅಂಬರೀಶ್ ಅವರನ್ನು ಸ್ಮರಿಸಿದರು. ಅಂಬರೀಷ್ ಅವರು ನನ್ನ ತಂದೆ ಇದ್ದ ಹಾಗೆ. ಯಾವಾಗಲೂ ನನ್ನನ್ನು ಬೆಂಬಲಿಸುತ್ತಿದ್ದರು. ಇದೀಗ ರಾಕ್ ಲೈನ್ ವೆಂಕಟೇಶ್ ನನ್ನ ಸಿನಿಮಾ ಇಲ್ಲಿಗೆ ಬರಲು ಸಹಾಯ ಮಾಡುತ್ತಿದ್ದಾರೆ. ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ನಾನು ರಾಕ್ ಲೈನ್ ವೆಂಕಟೇಶ್ ಅವರನ್ನು ಕೇಳಿದಾಗ, ಅವರು ಮುಕುಂದ ಚಿತ್ರಮಂದಿರದ ಮಾಲೀಕರಾದ ವೆಂಕಟೇಶ್ ಅವರನ್ನು ಪರಿಚಯಿಸಿದರು. ವೆಂಕಟೇಶ್ ಅವರು ನಮ್ಮ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ' ಎಂದು ತಿಳಿಸಿದರು.

ಬಳಿಕ ಜಿನ್ನಾ ಚಿತ್ರದ ಬಗ್ಗೆ ಮಾತನಾಡಿದ ವಿಷ್ಣು ಮಂಚು ಅವರು, ನನಗೆ ಕಥೆ ಹೇಳುವ ಮೊದಲೇ ನಿರ್ದೇಶಕ ಸೂರ್ಯ ಅವರು ಸನ್ನಿ ಲಿಯೋನ್ ಕಾಲ್‌ಶೀಟ್ ತೆಗೆದುಕೊಂಡಿದ್ದರು. ಇದು ನನ್ನ ಫೇವರಿಟ್ ಆ್ಯಕ್ಷನ್, ಕಾಮಿಡಿ ಜಾನರ್ ಚಿತ್ರವಾಗಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕೂಡ ಒಳಗೊಂಡಿದೆ. ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಲ್ಲ ತೆಲುಗು. ಭಾಷೆಯಲ್ಲೇ ಬಿಡುಗಡೆ ಮಾಡುತ್ತಿದ್ದೇವೆ' ಎಂದು ಹೇಳಿದರು. 

ಜಿನ್ನಾ ಚಿತ್ರವನ್ನು ಸೂರ್ಯ ಅವರು ನಿರ್ದೇಶಿಸಿದ್ದು, ಚಿತ್ರ ಕಥೆಯನ್ನು ಕೋನ ವೆಂಕಟೇಶ್ ಅವರು ಬರೆದಿದ್ದಾರೆ. ಚಿತ್ರವು ಕಾಮಿಡಿ ಡ್ರಾಮಾ ಆಗಿದ್ದು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. 

ಚಿತ್ರವು ಎವಿಎ ಎಂಟರ್‌ಟೈನ್‌ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಚಿತ್ರಕ್ಕೆದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಚಿತ್ರವು ಚೋಟಾ ಕೆ ನಾಯ್ಡು ಅವರು ಛಾಯಾಗ್ರಹಣವನ್ನು ಹೊಂದಿದೆ. 

ವಿಷ್ಣು ಮಂಚು ಅವರಿಗೆ ನಾಯಕಿಯರಾಗಿ ಸನ್ನಿ ಲಿಯೋನ್ ಹಾಗೂ ಪಾಯಲ್ ರಜಪೂತ್ ಅಭಿನಯಿಸಿದ್ದಾರೆ. ವೆನ್ನಿಲಾ ಕಿಶೋರ್, ಸತ್ಯಂ ರಾಜೇಶ್, ನರೇಶ್, ಉಮೇಶ್‌ ಕೌಶಿಕ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

SCROLL FOR NEXT