ಸಿನಿಮಾ ಸುದ್ದಿ

ಮುಂದಿನ ಸಿನಿಮಾ ತಯಾರಿ ಕೆಲಸ ನಡೆಯುತ್ತಿದೆ, ಆದಷ್ಟು ಬೇಗ ಘೋಷಣೆ: ನಂಜನಗೂಡಿನಲ್ಲಿ ನಟ ಯಶ್

Sumana Upadhyaya

ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್(Rocking star Yash) ಇಂದು ಬುಧವಾರ ಪತ್ನಿ ರಾಧಿಕಾ ಪಂಡಿತ್‌(Radhika Pandit) ಮತ್ತು ಮಕ್ಕಳ ಜೊತೆ ದಕ್ಷಿಣದ ಕಾಶಿ ಎಂದು ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. 

ದೇವರಿಗೆ ಪೂಜೆ ಸಲ್ಲಿಸಿ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳು ಸಿಕ್ಕಿದಾಗ ಮಾತನಾಡಿದ ಯಶ್, ನಮ್ಮ ಮನೆ ದೇವರು ನಂಜುಂಡೇಶ್ವರ, ಹೀಗಾಗಿ ಪೂಜೆ ಸಲ್ಲಿಸಲು ಬಂದಿದ್ದೆವು ಎಂದರು.

ನಂತರ ಮುಂದಿನ ಸಿನಿಮಾ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರು. ಅದಕ್ಕೆ ಯಶ್, ಜನರು ಹಣ ಕೊಟ್ಟು ಥಿಯೇಟರ್ ಗೆ ಬಂದು ನಮ್ಮ ಸಿನಿಮಾಗಳನ್ನು ನೋಡುತ್ತಾರೆ. ಅವರ ಹಣಕ್ಕೆ ಬೆಲೆ ಇದೆ, ಜನರಿಂದಾಗಿ ನಾವು ಕಲಾವಿದರು ಬೆಳೆಯುತ್ತೇವೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡಬಾರದು. ಉತ್ತಮ ಚಿತ್ರ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಸದ್ಯದಲ್ಲಿಯೇ ಘೋಷಿಸುತ್ತೇನೆ ಎಂದರು.

ಸಿನಿಮಾ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಪತ್ನಿ, ಮಕ್ಕಳು ಮತ್ತು ರಾಧಿಕಾ ಪಂಡಿತ್ ಅವರ ತಂದೆ-ತಾಯಿ ಜೊತೆ ಕಳೆದ ಮೂರು ದಿನಗಳಿಂದ ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಇಂದು ಬಂದಿದ್ದರು.

ಎಲ್ಲೂ ಹೋಗಲ್ಲ: ಬಾಲಿವುಡ್ ನಿಂದ ಇತ್ತೀಚೆಗೆ ರಣಬೀರ್ ಕಪೂರ್ ರಾಮನ ಪಾತ್ರದ ಎದುರು ರಾವಣ ವಿಲನ್ ಪಾತ್ರಕ್ಕಾಗಿ ಯಶ್ ಗೆ ಆಹ್ವಾನ ಬಂದಿತ್ತು, ಅದನ್ನು ಅವರು ತಿರಸ್ಕರಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಯಶ್ ಕನ್ನಡ ಬಿಟ್ಟು ಬಾಲಿವುಡ್ ಗೆ ಹೋಗುತ್ತಾರೆಯೇ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಕೇಳಿದಾಗ ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ. ಡೋಂಟ್ ವರಿ ಎಂದರು.

SCROLL FOR NEXT