ಸಿನಿಮಾ ಸುದ್ದಿ

ಅಪಘಾತ: ಕಾಲು ಕಳೆದುಕೊಂಡ ಪಾರ್ವತಮ್ಮ ರಾಜ್​ಕುಮಾರ್​ ತಮ್ಮನ ಮಗ ಸೂರಜ್; ಸ್ಯಾಂಡಲ್‌ವುಡ್ ಕನಸು ನುಚ್ಚುನೂರು!

Ramyashree GN

ಚಾಮರಾಜನಗರ: ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ ಎಂಟ್ರಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಪಾರ್ವತಮ್ಮ ರಾಜ್‌ಕುಮಾರ್ ಅವರ ತಮ್ಮನ ಮಗನಾದ ಸೂರಜ್‌ಗೆ ತೆರಳುತ್ತಿದ್ದ ಬೈಕ್‌ಗೆ ನಂಜನಗೂಡಿನ ಬಳಿ ಲಾರಿಯೊಂದು ಡಿಕ್ಕಿ ಹೊಡೆದಿದೆ. 

ಶನಿವಾರ (ಜೂನ್​ 24) ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಸೂರಜ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಸೂರಜ್​ ಬೈಕ್​ನಲ್ಲಿ ಊಟಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ, ಅವರ ಕಾಲಿನ ಮೇಲೆ ಟಿಪ್ಪರ್​ ಹರಿದಿದೆ. ಹೀಗಾಗಿ, ಅವರ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ವೈದ್ಯರು ಬಲಗಾಲನ್ನು ಕತ್ತರಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ನಟನಾಗಬೇಕು ಎಂದು ಸೂರಜ್​ ಕನಸು ಕಂಡಿದ್ದರು. ಕೆಲವು ಚಿತ್ರಗಳ ಶೂಟಿಂಗ್​ನಲ್ಲೂ ಪಾಲ್ಗೊಂಡಿದ್ದರು. ‘ಭಗವಾನ್​ ಶ್ರೀಕೃಷ್ಣ ಪರಮಾತ್ಮ’ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಅವರು ಅನೌನ್ಸ್​ ಮಾಡಿದ್ದರು.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಸದ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಐಸಿಯುನಲ್ಲೇ ಇರಲು ವೈದ್ಯರು ಸೂಚಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಸದ್ಯ ಆಸ್ಪತ್ರೆಗೆ ನಿರ್ಮಾಪಕ ಚಿನ್ನೇಗೌಡ, ಶಿವರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​ ಸೇರಿದಂತೆ ಡಾ. ರಾಜ್​ ಕುಟುಂಬದ ಹಲವರು ಭೇಟಿ ನೀಡಿದ್ದಾರೆ.

SCROLL FOR NEXT