ಸಿನಿಮಾ ಸುದ್ದಿ

'ಬ್ಯಾಡ್ ಮ್ಯಾನರ್ಸ್' ನಲ್ಲಿ ಅಭಿಷೇಕ್ ‘ರಿಯಲ್ ರೆಬಲ್ ಸ್ಟಾರ್' ಆಗಿ ಬದಲಾಗಿದ್ದಾರೆ: ದರ್ಶನ್

Shilpa D

ನಿರ್ದೇಶಕ ಸೂರಿ ಮತ್ತು ಅಭಿಷೇಕ್ ಅಂಬರೀಶ್ ಅವರ ಕಾಂಬಿನೇಷನ್ ನ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್ ಸಿನಿಮಾ ನವೆಂಬರ್ 24 ರಂದು ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ಸಿನಿಮಾ ಟ್ರೇಲರ್ ಬಿಡುಗಡೆಯಾಯಿತು, ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್, ಸುಮಲತಾ ಅಂಬರೀಶ್, ರಾಕ್‌ಲೈನ್ ವೆಂಕಟೇಶ್ ,ಹಿರಿಯ ನಟ ದತ್ತಣ್ಣ, ಮತ್ತು ಉಮೇಶ್, ವಿನೋದ್ ಪ್ರಭಾಕರ್, ಧನ್ವೀರ, ಮತ್ತು ವಿಕ್ರಮ್ ರವಿಚಂದ್ರನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ನಟ ದರ್ಶನ್, ಸೂರಿ ಅವರ ಸಿನಿಮಾಗಳು ಭಿನ್ನವಾಗಿರುತ್ತವೆ. ಅವರದ್ದೇ ಆದ ದಾರಿಯಲ್ಲಿ ಅವರು ಸಿನಿಮಾ ಮಾಡುತ್ತಾರೆ. ಅವರ ಸಿನಿಮಾಗಳಲ್ಲಿ ಸಮಾಜವನ್ನು ಹಾನಿ ಮಾಡುತ್ತಿರುವ ವಿಷಗಳಿರುತ್ತವೆ. ಈ ಹಿಂದೆ ಡ್ರಗ್ಸ್​ ಇತ್ತು. ಈ ಸಿನಿಮಾದಲ್ಲಿ ಗನ್ ಇದೆ. ಯುವಕರು ಹೇಗೆ ಗನ್​ಗಳನ್ನು ಬಳಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ಸೂರಿಯವರು ಸಿನಿಮಾ ಮಾಡಿದ್ದಾರೆ ಎಂದರು.

ಅಭಿಷೇಕ್ ಅಂಬರೀಶ್ ಬಗ್ಗೆ ಮಾತನಾಡಿದ ನಟ ದರ್ಶನ್, ಮೊದಲ ಸಿನಿಮಾಗೂ ಈ ಸಿನಿಮಾಕ್ಕೂ ಅಭಿಷೇಕ್ ಅಂಬರೀಶ್ ಬಹಳ ಬದಲಾಗಿದ್ದಾರೆ. ಅವರ ಆಕ್ಟಿಂಗ್ ಸ್ಕಿಲ್ ಬದಲಾಗಿದೆ, ಸ್ಟೈಲ್ ಬದಲಾಗಿದೆ, ಇದಕ್ಕೆ ಸೂರಿಯವರೇ ಕಾರಣ. ಇಷ್ಟು ದಿನ ಅವನನ್ನು ‘ಯಂಗ್ ರೆಬಲ್ ಸ್ಟಾರ್’ ಎನ್ನುತ್ತಿದ್ದಿರಿ, ಇನ್ನು ಮುಂದೆ ಅವರು ‘ರಿಯಲ್ ರೆಬಲ್ ಸ್ಟಾರ್’. ಅಭಿ ಈ ಸಿನಿಮಾದಲ್ಲಿ ನೋಡಲು ಸಹ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ನವೆಂಬರ್ 24ಕ್ಕೆ ಬಿಡುಗಡೆ ಆಗಲಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ವೀಕ್ಷಿಸಿ ಎಂದರು.  

ಅಭಿಷೇಕ್ ತಾಯಿ ಸುಮಲತಾ  ಬ್ಯಾಡ್ ಮ್ಯಾನರ್ಸ್ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಟ್ರೇಲರ್ ನೋಡಿದ ನಂತರ ನಾನು ಥ್ರಿಲ್ ಆಗಿದ್ದೇನೆ ಎಂದಿದ್ದಾರೆ. ಅಂಬರೀಶ್ ಅವರ ನಿಧನದ 4 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನವೆಂಬರ್ 24 ರಂದು ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ ಎಂದು ಹೆೇಳಿದರು.

ಸೂರಿ ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ಕೂಡ ನಟಿಸಿದ್ದಾರೆ. ಸುಧೀರ್ ಕೆ ಎಂ ನಿರ್ಮಾಣದ, ಬ್ಯಾಡ್ ಮ್ಯಾನರ್ಸ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸೂರಿ ಮತ್ತು ಸುರೇಂದ್ರನಾಥ್ ಮತ್ತು ಅಮ್ರಿ ಬರೆದಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಮತ್ತು ಶೇಖರ್ ಅವರ ಛಾಯಾಗ್ರಹಣವಿದೆ.

SCROLL FOR NEXT