ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ನಿರ್ದೇಶಕ ಸಚಿನ್ ರವಿ ಬಾಲಿವುಡ್‌ಗೆ ಎಂಟ್ರಿ!

Ramyashree GN

ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡದ ಫ್ಯಾಂಟಸಿ-ಅಡ್ವೆಂಚರ್ ಕಾಮಿಡಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಿರ್ದೇಶಕ ಸಚಿನ್ ರವಿಗೆ ಇದೀಗ ಬಾಲಿವುಡ್‌ನಿಂದ ಕರೆ ಬಂದಿದೆ. ಸಚಿನ್ ಸದ್ಯ ಮುಂಬೈನಲ್ಲಿ ನೆಲೆಸಿದ್ದು, ಅವರು ಶಾಹಿದ್ ಕಪೂರ್ ನಟನೆಯ ದೊಡ್ಡ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರ ಪೂಜಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನ ಬೆಂಬಲವಿದೆ ಎನ್ನುವ ಊಹಾಪೋಹಗಳಿವೆ.

ಈ ಕುರಿತು ಸಚಿನ್ ರವಿ ಅವರೇ ಸ್ಪಷ್ಟಪಡಿಸಿದ್ದು, ಸದ್ಯ ತಾವೀಗ ಮುಂಬೈನಲ್ಲಿರುವುದಾಗಿ ಮತ್ತು ಶಾಹಿದ್ ಕಪೂರ್ ಅವರೊಂದಿಗೆ ಸಂಭವನೀಯ ಚಿತ್ರದ ಬಗ್ಗೆ ಖಚಿತಪಡಿಸಿದ್ದಾರೆ. 'ನಾನು ಕಳೆದ ವರ್ಷದಿಂದ ಈ ಯೋಜನೆಗಾಗಿ ಕೆಲಸ ಮಾಡುತ್ತಿದ್ದೇನೆ. ಪ್ರೊಡಕ್ಷನ್ ಹೌಸ್ ಮತ್ತು ನಟನೊಂದಿಗೆ ನಿರಂತರ ಮಾತುಕತೆಯನ್ನು ನಡೆಸುತ್ತಿದ್ದೇನೆ. ಆದಾಗ್ಯೂ, ಅಧಿಕೃತ ಘೋಷಣೆಯಾಗುವವರೆಗೆ ನಾನು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ಅವರು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸಚಿನ್ ರವಿ - ಶಾಹಿದ್ ಕಪೂರ್

ಈ ಮುಂಬರುವ ಚಿತ್ರವು ಮಹಾಭಾರತದಿಂದ ಪ್ರೇರಿತವಾದ ಆಕ್ಷನ್-ಪ್ಯಾಕ್ಡ್, ಪುರಾಣ ಆಧಾರಿತ ಯೋಜನೆಯಾಗಿದೆ ಎಂಬ ಸುಳಿವು ಲಭ್ಯವಾಗಿದೆ. ವಿಎಫ್‌ಎಕ್ಸ್‌ನಲ್ಲಿ ಸಚಿನ್ ರವಿ ಅವರ ಪರಿಣತಿಯನ್ನು ಗಮನಿಸಿದರೆ, ತಂತ್ರಜ್ಞಾನವು ಈ ಚಿತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಭಾವಿಸಬಹುದು. ರೋಶನ್ ಆಂಡ್ರ್ಯೂಸ್ ಅವರ ನಿರ್ದೇಶನದ ಚಿತ್ರವನ್ನು ಶಾಹಿದ್ ಕಪೂರ್ ಪೂರ್ಣಗೊಳಿಸಿದ ನಂತರ ಮತ್ತು 2024ರಲ್ಲಿ ಚಿತ್ರ ಸೆಟ್ಟೇರಿದ ನಂತರ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅನಾವರಣಗೊಳಿಸಲಾಗುವುದು ಎಂದು ತಿಳಿದುಬಂದಿದೆ. 

ಶಾಹಿದ್ ಅವರನ್ನು ಸಂಪರ್ಕಿಸಲು ಕಾರಣವೇನು ಎಂಬುದರ ಕುರಿತು ಉತ್ತರಿಸಿದ ಸಚಿನ್, ಮ್ಯೂಚುಯಲ್ ಕನೆಕ್ಷನ್ ಮೂಲಕ ಶಾಹಿದ್ ಅವರನ್ನು ಸಂಪರ್ಕಿಸಲಾಯಿತು ಮತ್ತು ಈ ಮೂಲಕ ಚಿತ್ರ ನಿರ್ದೇಶಿಸುವ ಅವಕಾಶ ನನಗೆ ದೊರೆಯಿತು ಎಂದರು. 

ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಸಚಿನ್ ಆರಂಭದಲ್ಲಿ ತಮ್ಮ ಎರಡನೇ ಪ್ರಾಜೆಕ್ಟ್ ಅಶ್ವತ್ಥಾಮ ಎಂಬ ಪೌರಾಣಿಕ ಸಿನಿಮಾವನ್ನು ಘೋಷಿಸಿದರು. ಇದರಲ್ಲಿ ನಟ ಶಿವರಾಜಕುಮಾರ್ ಅಭಿನಯಿಸಬೇಕಿತ್ತು. ಆದರೆ, ಈ ಚಿತ್ರದ ಬಗ್ಗೆ ಯಾವುದೇ ಹೆಚ್ಚಿನ ಅಪ್‌ಡೇಟ್‌ಗಳು ಲಭ್ಯವಾಗಲಿಲ್ಲ. 'ಅಶ್ವತ್ಥಾಮ ಚಿತ್ರವನ್ನು ಸದ್ಯಕ್ಕೆ ಮುಂದೂಡಲಾಗಿದೆ' ಎನ್ನುತ್ತಾರೆ ಅವರು.

SCROLL FOR NEXT