ಸಿನಿಮಾ ಸುದ್ದಿ

'ಟಗರು ಪಲ್ಯ ಸಿನಿಮಾ ವೀಕ್ಷಿಸುವಂತೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿದ ನಟ 'ಡಾಲಿ' ಧನಂಜಯ್

Ramyashree GN

ನಟ 'ಡಾಲಿ' ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾ ಅಕ್ಟೋಬರ್ 27ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಈಚೆಗಷ್ಟೇ ನಟ ದರ್ಶನ್ 'ಟಗರು ಪಲ್ಯ' ಸಿನಿಮಾದ ಟ್ರೇಲರ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೀಗ, ನಟ ಧನಂಜಯ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವನ್ನು ಭೇಟಿಯಾಗಿದ್ದಾರೆ. ಚಿತ್ರದ ಟ್ರೇಲರ್ ಅನ್ನು ತೋರಿಸಿ, ಸಿನಿಮಾ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದ್ದಾರೆ.

ಡಾಲಿ ಅವರ ಜೊತೆಯಲ್ಲಿದ್ದ ನಟಿ ತಾರಾ ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ. ಆಮಂತ್ರಣ ಪತ್ರಿಕೆ ನೀಡಿ ಸಿಎಂ ಜತೆ ಸಭೆ ನಡೆಸಿದರು. 

ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟ ನಾಗಭೂಷಣ್ ಮತ್ತು 'ನೆನಪಿರಲಿ' ಪ್ರೇಮ್ ಪುತ್ರಿ ಅಮೃತಾ ನಟಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ 'ಟಗರು ಪಲ್ಯ' ಸಿನಿಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಧನಂಜಯ್, 'ತುಂಬು ಹೃದಯದ ಧನ್ಯವಾದಗಳು ಸರ್. ತಮ್ಮ ಆಗಮನಕ್ಕಾಗಿ ಇಡೀ ತಂಡ ಕಾಯುತ್ತಿದೆ..' ಎಂದು ತಿಳಿಸಿದ್ದಾರೆ.

ಟಗರು ಪಲ್ಯ' ಸಿನಿಮಾವನ್ನು ಇದೇ ಮೊದಲ ಬಾರಿಗೆ ಉಮೇಶ್ ಕೆ ಕೃಪಾ ನಿರ್ದೇಶಿಸಿದ್ದು, ಅಮೃತಾ ಪ್ರೇಮ್ ಮತ್ತು ನಾಗಭೂಷಣ್ ಅವರಷ್ಟೇ ಅಲ್ಲದೆ ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ಮತ್ತು ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಅಡುಗೆ ಮಾಡಿ ದೇವರಿಗೆ ಅರ್ಪಿಸುವ ಕಾರ್ಯಕ್ರಮದ ಸುತ್ತ ಚಿತ್ರ ಸಾಗುತ್ತದೆ. ಕರ್ನಾಟಕದ ಗ್ರಾಮೀಣ ಜೀವನದ ಸಾರವನ್ನು ಚಿತ್ರಿಸುವ, ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗುರಿಯನ್ನು ಚಿತ್ರ ಹೊಂದಿದೆ.

SCROLL FOR NEXT