ಸಿನಿಮಾ ಸುದ್ದಿ

'ಗ್ರಾಮಾಯಣ' ಚಿತ್ರತಂಡ ಸೇರಿಕೊಂಡ ನಟಿ ಮೇಘಾ ಶೆಟ್ಟಿ

Manjula VN

ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾ ಬಹಳ ಹಿಂದೆ ಸೆಟ್ಟೇರಿತ್ತು. 25 ದಿನಗಳ ಚಿತ್ರೀಕರಣದ ನಂತರ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿತ್ತು. ಹೊಸ ನಿರ್ಮಾಪಕರು ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಚಿತ್ರಕ್ಕೆ ಮರುಜೀವ ಸಿಕ್ಕಂತಾಗಿದೆ.

ಚಿತ್ರದ ಚಿತ್ರೀಕರಣ ಅಕ್ಟೋಬರ್ 4 ರಂದು ಪ್ರಾರಂಭವಾಗಲಿದ್ದು, ಮೊದಲ ದಿನದ ಚಿತ್ರೀಕರಣ ಕಡೂರಿನಲ್ಲಿ ನಡೆಯಲಿದೆ. ಚಿತ್ರದಲ್ಲಿ ನಟನಾಗಿ ವಿನಯ್ ರಾಜ್ ಕುಮಾರ್ ಅವರು ನಟಿಸುತ್ತಿರುವುದು ಅಧಿಕೃತವಾಗಿದ್ದು, ನಿರ್ಮಾಪಕರು ಇದೀಗ ಚಿತ್ರದ ನಾಯಕ ನಟಿಯಾಗಿ ಮೇಘಾ ಶೆಟ್ಟಿಯವರನ್ನು ಅಂತಿಮಗೊಳಿಸಿದ್ದಾರೆ.

ಮೇಘಾ ಶೆಟ್ಟಿ ಕಿರುತೆರೆ ಧಾರಾವಾಹಿ ಜೊತೆ ಜೊತೆಯಲಿ ಮೂಲಕ ಹೆಸರು ಗಳಿಸಿದ್ದು, ಗೋಲ್ಟನ್ ಸ್ಟಾರ್ ಗಣೇಶ್ ಅವರ ಟ್ರಿಬಲ್ ರೈಡಿಂಗ್ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ನಂತರ ಕೃಷ್ಣ ನಟಿಸಿದ ದಿಲ್ಪಸಂದ್ ಚಿತ್ರದಲ್ಲಿಯೂ ನಟಿಸಿದ್ದರು.

ಜಯತೀರ್ಥ ನಿರ್ದೇಶನದ ಕೈವಾ ಮತ್ತು ಆಪರೇಷನ್ ಲಂಡನ್ ಕೆಫೆ ಚಿತ್ರದಲ್ಲಿಯೂ ನಟಿಸಿದ್ದು, ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದೀಗ ಗ್ರಾಮಾಯಣ ಚಿತ್ರತಂಡವನ್ನು ಸೇರಿಕೊಂಡಿದ್ದು, ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಸಜ್ಜಾಗುತ್ತಿದ್ದಾರೆ.

ಚಿತ್ರವನ್ನು ಲಹರಿ ಫಿಲಂಸ್‌ ಹಾಗೂ ವೀನಸ್‌ ಎಂಟರ್‌ಟೈನರ್ ನಿರ್ಮಿಸುತ್ತಿದೆ. ಹಳ್ಳಿಯ ಹಿನ್ನೆಲೆಯಲ್ಲಿ ವಿನಯ್ ಗ್ರಾಮೀಣ ಯುವಕನ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಖ್ಯಾತ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆ್ಯಂಕರಿಂಗ್ ಮತ್ತು ಮಜಾ ಟಾಕೀಸ್ ರಿಯಾಲಿಟಿ ಶೋ ಮೂಲಕ ಹೆಸರುವಾಸಿಯಾಗಿರುವ ನಟಿ ಅಪರ್ಣಾ ಒಂದು ವಿರಾಮದ ನಂತರ ಈ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಚಿತ್ರತಂಡ ಅಂತಿಮ ಹಂತದ ಕಾಸ್ಟಿಂಗ್‌ನಲ್ಲಿದ್ದು, ಶೀಘ್ರದಲ್ಲೇ ಸಂಪೂರ್ಣ ತಾರಾಗಣದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ.

ಏತನ್ಮಧ್ಯೆ, ಅಂದೊಂದಿತ್ತು ಕಾಲ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ವಿನಯ್, ತಮ್ಮ ಬಹು ನಿರೀಕ್ಷಿತ ಚಿತ್ರ ಪೆಪೆ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲೇಶ್ ನಾಯರ್ ನಿರ್ದೇಶನದ ಈ ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಚಿತ್ರತಂಡ ಘೋಷಣೆ ಮಾಡಲಿದೆ.

SCROLL FOR NEXT