ಬೆಂಗಳೂರು/ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ದಿನ ಎತ್ತರದಲ್ಲಿ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಯುವಕರ ಕುಟುಂಬಕ್ಕೆ ನಟನ ಕಡೆಯಿಂದ ಪರಿಹಾರದ ಚೆಕ್ ತಲುಪಿದೆ.
ಯಶ್ ಅವರ ಆಪ್ತರು ನಿನ್ನೆ ಗ್ರಾಮಕ್ಕೆ ಭೇಟಿ ನೀಡಿ ಯಶೋಮಾರ್ಗ ಫೌಂಡೇಶನ್ ಕಡೆಯಿಂದ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದಾರೆ. ಯಶ್ ಸ್ನೇಹಿತರು ಬಂದು ಪರಿಹಾರ ಹಣ ನೀಡಿದ್ದಾಗ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲಕುವಂತಿತ್ತು. ಮಕ್ಕಳನ್ನು ಕಳೆದುಕೊಂಡ ನೋವು ಪೋಷಕರನ್ನು ಕಾಡುತ್ತಿದೆ.
ಇದನ್ನೂ ಓದಿ: ಹುಟ್ಟುಹಬ್ಬ ಅಂದರೆ ಅಸಹ್ಯಪಡುವಂತಾಗಿದೆ: ನಟ ಯಶ್
ಯಶ್ ಅವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ದುರಂತ ಸಂಭವಿಸಿದ್ದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಮಕ್ಕಳನ್ನು ಕಳೆದುಕೊಂಡ ಮೂರೂ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರದ ಹಣ ನೀಡಿದರು.
ಘಟನೆ ಹಿನ್ನೆಲೆ: ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಅಭಿಮಾನಿಗಳು ಈ ಬಾರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ಜನವರಿ 7ರಂದು ರಾತ್ರಿ ದುರ್ಘಟನೆ ನಡೆದಿದೆ. ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿದ್ದರಿಂದ ಮುರಳಿ, ನವೀನ್ ಮತ್ತು ಹನುಮಂತ ಮೃತಪಟ್ಟಿದ್ದರು.