ಚೆಲುವಿನ ಚಿತ್ತಾರ ಮತ್ತು ಗಜಕೇಸರಿ ಖ್ಯಾತಿಯ ನಟಿ ಅಮೂಲ್ಯ ಕೆಲವು ವರ್ಷಗಳ ನಂತರ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಕೊನೆಯದಾಗಿ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ, ಮದುವೆಯಾದ ನಂತರ ಮತ್ತು ಅವಳಿ ಗಂಡು ಮಕ್ಕಳ ಆರೈಕೆಗಾಗಿ ಬ್ರೇಕ್ ತೆಗೆದುಕೊಂಡಿದ್ದರು.
ಏಳು ವರ್ಷಗಳ ನಂತರ ಮತ್ತೆ ಕ್ಯಾಮರಾ ಮುಂದೆ ಬರಲು ಅಮೂಲ್ಯ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ದೇವರಾಜ್ ಮತ್ತು ಗುರುದತ್ತ ಗಾಣಿಗ ಅವರ ಬಹು ನಿರೀಕ್ಷಿತ ಸಿನಿಮಾ ಕರಾವಳಿ ಮೂಲಕ ಅಮೂಲ್ಯ ಪುನಾರಾಗಮನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಭಾವಂತ ಕಲಾವಿದರ ಹುಡುಕಾಟದಲ್ಲಿದ್ದ ನಿರ್ದೇಶಕರು, ಆ ಪಾತ್ರಕ್ಕೆ ಅಮೂಲ್ಯ ಸೂಕ್ತ ಎಂದು ನಿರ್ಧರಿಸಿದ್ದಾರೆ, ಈ ಸಂಬಂಧ ನಟಿಯ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶ್ರಾವಣಿ ಸುಬ್ರಹ್ಮಣ್ಯ ನಟಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅತಿ ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಬಾಲ ಕಲಾವಿದೆಯಾಗಿ ಸಿನಿಮಾ ಪಯಣ ಆರಂಭಿಸಿದ ಅಮೂಲ್ಯ 13ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಅವರೊಂದಿಗೆ ಕರಾವಳಿಯಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.
ಕರಾವಳಿಯು ಈಗಾಗಲೇ ತನ್ನ ಫಸ್ಟ್ ಲುಕ್ನೊಂದಿಗೆ ಕುತೂಹಲ ಕೆರಳಿಸಿದೆ. ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ಒಳಗೊಂಡಿದೆ. ಪ್ರಜ್ವಲ್ ದೇವರಾಜ್ ವಿಶಿಷ್ಟ ಫಸ್ಟ್ ಲುಕ್ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುಳಿವು ನೀಡುತ್ತದೆ.
ಮೂಲಗಳ ಪ್ರಕಾರ, ಅಮೂಲ್ಯ ಪಾತ್ರವು ಕಥೆಗೆ ಆಸಕ್ತಿದಾಯಕ ಆಯಾಮವನ್ನು ತರಲು ಸಿದ್ಧವಾಗಿದೆ. ಏತನ್ಮಧ್ಯೆ, ನಿರ್ದೇಶಕರು ಉಳಿದ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ. ಫೆಬ್ರವರಿ ಮಧ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಪ್ಲಾನ್ ಮಾಡಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ.
ಅಂಬಿ ನಿಂಗ್ ವಯಸ್ಸಾಯ್ತೋ ನಂತರ ನಿರ್ದೇಶಕ ಗುರುದತ್ತ ಗಾಣಿಗ ಎರಡನೇ ಸಿನಿಮಾ ಕರಾವಳಿ. ವಿಕೆ ಫಿಲ್ಮ್ಸ್ ಸಹಯೋಗದೊಂದಿಗೆ ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಹಣ ಮತ್ತು ಸಚಿನ್ ಬಸ್ರೂರ್ ಸಂಗೀತವಿದೆ.