ದುನಿಯಾ ವಿಜಯ್ ನಟನೆಯ ಸಲಗ ಚಿತ್ರದಲ್ಲಿ ಸೂರಿ ಅಣ್ಣಾ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದ ನಟ ದಿನೇಶ್ ಅವರು, ಇದೀಗ ಅದೇ ಹೆಸರಿನ ಹೊಸ ಚಿತ್ರದ ಮೂಲಕ ಪ್ರೇಕ್ಷಕರ ರಂಜಿಸಲು ಸಜ್ಜಾಗಿದ್ದಾರೆ.
ಚಿತ್ರದಲ್ಲಿ ದಿನೇಶ್ ಅವರು ಕೇವಲ ನಾಯಕ ನಟನಾಗಿ ಮಾತ್ರವಷ್ಟೇ ಅಲ್ಲದೆ, ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಅದ್ದೂರಿಯಾಗಿ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು.
ಈ ವೇಳೆ ಮಾತನಾಡಿದ ಸೂರಿ (ದಿನೇಶ್) ಅವರು, ‘ನಾನು ಈ ಸಿನಿಮಾ ನಿರ್ಮಾಣ ಮಾಡಲು ಇಲ್ಲಿ ಬಂದಿರುವ ಸಾಕಷ್ಟು ಜನರು ಸ್ಪೂರ್ತಿ. ನಮ್ಮ ತಂದೆ ಕೆ. ದೊರೈ ಮತ್ತು ತಾಯಿ ಜ್ಯೋತಿಯಮ್ಮ ಅವರ ಆಶೀರ್ವಾದವೇ ಕಾರಣ. ನನ್ನ ಸಹೋದರ ವಿಜಯ್ ಅವರು ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾದಲ್ಲಿ ರೌಡಿಸಂ ಕಥಾಹಂದರ ಇದೆ. ಆದರೆ ಯಾರೂ ಕೂಡ ರೌಡಿಸಂ ಮಾಡಬೇಡಿ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಯಾರೂ ಅಂತಹ ಜೀವನವನ್ನು ಆರಿಸಿಕೊಳ್ಳಬಾರದು. ಯಾವಾಗಲೂ ಕುಟುಂಬವೇ ಮೊದಲಾಗಬೇಕು. ಯುವಕರನ್ನು ಗುರಿಯಾಗಿರಿಕೊಂಡು ಚಿತ್ರ ನಿರ್ಮಿಸಲಾಗಿದೆ. ‘ಸಲಗ ಚಿತ್ರದ ನಂತರ ಸೂರಿ ಅಣ್ಣ ಎಂದೇ ಎಲ್ಲರೂ ನನ್ನನ್ನು ಗುರುತಿಸುತ್ತಾರೆ ಎಂದು ಹೇಳಿದರು.
ಸೂರಿ ಅಣ್ಣ ಸಿನಿಮಾದಲ್ಲಿ ನಾನೇ ನಾಯಕನಾಗಿ ನಟಿಸಿದ್ದೇನೆ. ಸಂಭ್ರಮಶ್ರೀ ಅವರು ನಾಯಕಿ ಆಗಿದ್ದಾರೆ. ರವಿ ಕಾಳೆ, ಕಾಕ್ರೋಜ್ ಸುಧೀ, ಹರೀಶ್ ರಾಯ್, ಎಸ್.ಕೆ. ಉಮೇಶ್, ಪ್ರಕಾಶ್ ತುಮಿನಾಡು, ಪ್ರಸಾದ್, ವೇಡಿ ಅಣ್ಣ, ಚಿತ್ರಲ್ ರಂಗಸ್ವಾಮಿ, ಯಶಸ್ವಿನಿ ಗೌಡ, ಬೆನಕ ನಂಜಪ್ಪ, ಬೇಬಿ ಮರಿಶಾ, ಪ್ರವೀಣ್ ರಾಜ್ ಮುಂತಾದವರು ನನ್ನ ಜೊತೆ ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಚಿತ್ರಕ್ಕೆ ಎಂ.ಬಿ. ಅಳ್ಳಿಕಟ್ಟಿ ಅವರು ಛಾಯಾಗ್ರಹಣ, ಎನ್.ಎಂ. ವಿಶ್ವ ಅವರ ಸಂಕಲನವಿದೆ. ಎನ್. ರಾಜ್ ಅವರು ನೃತ್ಯ ನಿರ್ದೇಶನ ಮಾಡಿದ್ದು, ವಿಶ್ವ ಜಿ. ಕಲಾ ನಿರ್ದೇಶನ, ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಕೆ.ಎಂ. ಇಂದ್ರ ಅವರು ಸಂಗೀತ ನೀಡಿದ್ದಾರೆ. ಶ್ರೀಧರ್ ಕಶ್ಯಪ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.
ಸಿನಿಮಾದ ಕ್ರಿಯೇಟಿವ್ ಹೆಡ್ ಆಗಿ ರಂಜಿತ್ ತಿಗಡಿ ಅವರು ಕೆಲಸ ಮಾಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕಱಣ ಮುಕ್ತಾಯವಾಗಿದ್ದು, ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಎಂಆರ್ಜಿ ಮ್ಯೂಸಿಕ್ ಮೂಲಕ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.